ಕುರುಗೋಡು: ಇಲ್ಲಿಗೆ ಸಮೀಪದ ಕುಡಿತಿನಿ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಲಭಿಸದ ಕಾರಣ ಜನರು ತತ್ತರಿಸಿದ್ದಾರೆ. ಕೆಲವು ರೈತರು ಕೆರೆಗೆ ನೀರು ಸರಬರಾಜು ಮಾಡುವ ಕೊಳವೆ ಒಡೆದು, ಆಕ್ರಮವಾಗಿ ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳುಲು ಪ್ರಾರಂಭಿಸಿ ದ್ದಾರೆ. ಇದರಿಂದ ಕುಡಿಯುವ ನೀರಿನ ಮತ್ತಷ್ಟು ಸಮಸ್ಯೆಯಾಗಿದೆ. ಜಿಲ್ಲಾಧಿ ಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜೀವ್ಗಾಂಧಿ ಗ್ರಾಮೀಣ ಕುಡಿಯುವ ನೀರು ಯೋಜನೆ ಅಡಿ ಕೋಟಿಗಟ್ಟಲೆ ಅನುದಾನ ಬಳಸಿ ಎರಡು ವರ್ಷದ ಹಿಂದೆ ನಿರ್ಮಿಸಿದ ಕೆರೆಗೆ ಸುಮಾರು 12ಕಿ.ಮೀ. ದೂರದ ತಿಮ್ಮಾಲಾಪುರ ಬಳಿಯ ನೀರಾವರಿ ಕಾಲುವೆಯಿಂದ ಕೊಳವೆ ಜೋಡಣೆ ಮೂಲಕ ನೀರು ಸಬರಾಜಾಗುತ್ತಿದೆ.
ಮಾರ್ಗ ಮಧ್ಯದಲ್ಲಿ ಅಕ್ರಮ ನೀರು ಬಳಕೆಯಿಂದಾಗಿ ವರ್ಷದಿಂದ ಕೆರೆ ತುಂಬಿಸಲು ಪ್ರಯತ್ನಿಸಿದರೂ ಕೆರೆ ತುಂಬುತ್ತಿಲ್ಲ. ನೀರು ತುಂಬಿಸಲು ನಡೆದ ಮೊದಲ ಪ್ರಯತ್ನ ಕೆರೆ ತಳ ಭದ್ರವಿಲ್ಲದೆ ನಿರುಪಯುಕ್ತವಾಗಿತ್ತು.
ತುಂಬಿಸಿದ ನೀರನ್ನು ಕೆರೆಯೇ ಕುಡಿದಿತ್ತು. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ವರ್ಷದ ಹಿಂದೆ ಮನವಿ ಸಲ್ಲಿಸಿದ್ದರು. 8 ತಿಂಗಳ ಹಿಂದೆ ತಂತ್ರಜ್ಞರು ಭೇಟಿ ನೀಡಿ ಸಲಹೆ ನೀಡಿದ ಬಳಿಕ ಕೆರೆಗೆ ನೀರು ತುಂಬಿಸಲು ಪುನಃ ಪ್ರಯತ್ನಿಸಲಾಯಿತು. ಆದರೆ ನೀರು ಸರಬರಾಜು ಕೊಳವೆ ಒಡೆದು ರೈತರು ತಮ್ಮ ಜಮೀನಿಗೆ ಅಕ್ರಮವಾಗಿ ನೀರು ಬಳಕೆಮಾಡುತ್ತಿದ್ದು, ಇದುವರೆಗೂ ಕೆರೆ ತುಂಬಿಲ್ಲ. ಕಾರಣ ಕುಡಿವ ನೀರಿನ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.
ಕೆರೆ ನೀರಿನ ಅಕ್ರಮ ಬಳಕೆಗೆ ಕಡಿವಾಣ ಹಾಕಬೇಕು. ಕೊಳವೆ ಒಡೆದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕೆರೆ ಉಸ್ತುವಾರಿ ಹೊತ್ತ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಗ್ರಾಪಂ. ಉಪಾಧ್ಯಕ್ಷ ಮಲ್ಲಯ್ಯ, ಕರವೇ ಅಧ್ಯಕ್ಷ ಬಿ ಚಂದ್ರಶೇಖರ, ಕಾರ್ಯದರ್ಶಿ ವದ್ದಟ್ಟಿ ಎರ್ರಿಸ್ವಾಮಿ ಜಿ.ಪಂ. ತಾ.ಪಂ. ಮತ್ತು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.