ಬಳ್ಳಾರಿ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಜೆಡಿಎಸ್ ಹಾಗೂ ಎಸ್ಯುಸಿಐ ಪಕ್ಷಗಳ ವತಿಯಿಂದ ನಗರದ ವಿವಿಧೆಡೆ ಶುಕ್ರವಾರ ಪ್ರತ್ಯೇಕ ಪ್ರತಿಭಟನೆಗಳು ನಡೆದವು.
ಸ್ಥಳೀಯ ಮೇದಾರ ಓಣಿ, ಬಸವನಕುಂಟೆ, ಕೌಲ್ಬಝಾರ್ ಮೊದಲ ಗೇಟ್, ತಾಳೂರು ರಸ್ತೆ ಮತ್ತಿತರ ಕಡೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆಗಳು ನಡೆಸಲಾಯಿತು.
ಜೆಡಿಎಸ್ನ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೌಲ್ ಬಝಾರ್ನಲ್ಲಿ ಪ್ರತಿಭಟನೆಗೆ ಇಳಿದ ಸಾರ್ವಜನಿಕರು, ಕುಡಿಯುವ ನೀರು ನೀಡಲು ಸಾದ್ಯವಾಗದ ಪಾಲಿಕೆ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೀನಳ್ಳಿ ತಾಯಣ್ಣ ಹಾಗೂ ಮುಂಡ್ರಿಗಿ ನಾಗರಾಜ್ ಮಾತನಾಡಿ, ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದು, 10-15 ದಿನ ಕಳೆದರೂ ಸಾರ್ವಜನಿಕರಿಗೆ ನೀರು ಪೂರೈಕೆಯಾಗುತ್ತಿಲ್ಲ. ಎಂದರು.
ಪಕ್ಷದ ಮುಖಂಡರಾದ ಖುದ್ದೂಸ್, ರಸೂಲ್ಸಾಬ್, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಳಮ್ಮ, ಜ್ಯೋತಿ ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಭಾಸ್ಕರ ರೆಡ್ಡಿ, ವೈ.ದೂರ್ವಾಸ್, ಪಿ.ಜಗದೀಶ್ವರ ರೆಡ್ಡಿ, ಶ್ರೀಕಾಂತ ರೆಡ್ಡಿ, ಕೃಷ್ಣ, ವೆಂಕಟೇಶ್, ಸಂಜೀವ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಎಸ್ಯುಸಿಐನಿಂದ: ಎಸ್ಯುಸಿಐ ನೇತೃತ್ವದಲ್ಲಿ ಶುಕ್ರವಾರ ನಗರದ ಕೌಲ್ಬಝಾರ್ನ ರೈಲ್ವೆ ಗೇಟ್ ಬಳಿಯರಸ್ತೆಮೇಲೆ ಖಾಲಿ ಕೊಡ ಇರಿಸಿ ಪ್ರತಿಭಟನೆಗಿಳಿದ ಸಾರ್ವಜನಿಕರು, ನೀರು ಪೂರೈಸುವಂತೆ ಆಗ್ರಹಿಸಿದರು.
ಮೂಲ ಸೌಲಭ್ಯ ಒದಗಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದ್ದು, ಬೇಸಿಗೆ ವೇಳೆ ನೀರಿನ ಕೊರತೆ ನೀಗಿಸಲು ಪಾಲಿಕೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ ಎಂದು ತಿಳಿಸಲಾಯಿತು.
ಎಸ್ಯುಸಿಐ ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್, ಮಂಜುಳಾ, ಶಾಂತಾ, ಎ.ದೇವದಾಸ್, ನಾಗಲಕ್ಷ್ಮಿ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.