ಕೆಂಗೇರಿ: ನಾಗರಿಕರು ಕುಡಿಯುವ ನೀರಿನ ಅಭಾವ ಅರಿತು ಮಿತವಾಗಿ ಬಳಸಲು ಮುಂದಾಗಬೇಕು ಎಂದು ಬಿಬಿಎಂಪಿ ಸದಸ್ಯ ಎಂ.ಬಿ. ಗೋವಿಂದೇಗೌಡ ಮನವಿ ಮಾಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೆಗ್ಗನಹಳ್ಳಿ ವಾರ್ಡ್ನ ಮಾರುತಿ ನಗರದಲ್ಲಿ ಕೊಳವೆಬಾವಿ ಮೂಲಕ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
`ಈ ಹಿಂದೆ ವಾರ್ಡ್ ವ್ಯಾಪ್ತಿಯ ಕೆಲವು ಪ್ರದೇಶಗಳು ಗ್ರಾಮೀಣ ಪ್ರದೇಶಗಳಿಗೆ ಸೇರಿದ್ದರಿಂದ ಬಿಬಿಎಂಪಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗದೆ ಜನತೆ ತೊಂದರೆ ಅನುಭವಿಸುವಂತಾಯಿತು. ಇದೀಗ ವಾರ್ಡ್ನಲ್ಲಿ ನೀರಿನ ಬವಣೆ ನೀಗಿಸಲು ಬಿಬಿಎಂಪಿ ವತಿಯಿಂದ 13 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಅವುಗಳಲ್ಲಿ ಹನ್ನೊಂದರಲ್ಲಿ ನೀರು ದೊರೆತಿದೆ~ ಎಂದು ಅವರು ಹೇಳಿದರು.
`ನಿರುದ್ಯೋಗಿಗಳಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುವುದು. ಅರ್ಹ ನಿರುದ್ಯೋಗಿಗಳು ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕು~ ಎಂದರು.