ಕೆಂಗೇರಿ: ಸುಮಾರು ಒಂದು ವರ್ಷದಿಂದಲೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ನಗರದ ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯ ವಿಘ್ನೇಶ್ವರ ನಗರ, ಮುನೇಶ್ವರ ನಗರದ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಶಾಸಕರ ನಡುವಿನ ಅಸಹಕಾರ ಮನೋಭಾವದಿಂದ ಇಲ್ಲಿನ ಜನತೆ ಕುಡಿಯುವ ನೀರಿಗಾಗಿ ತೀವ್ರ ಬವಣೆ ಪಡುವಂತಾಗಿದೆ ಎಂದು ಅವರು ಆರೋಪಿಸಿದರು.
ಒಂದು ವರ್ಷದಿಂದಲೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ ಸಂಬಂಧಪಟ್ಟವರಿಗೆಲ್ಲಾ ದೂರು ನೀಡುತ್ತಾ ಬರುತ್ತಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಇದರಿಂದ ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಅಳಲನ್ನು ತೋಡಿಕೊಂಡರು.
ವಾರಕ್ಕೊಮ್ಮೆ ಟ್ಯಾಂಕರ್ನಲ್ಲಿ ನೀರು ಸರಬರಾಜು ಮಾಡಿದರೂ ಒಂದು ಮನೆಗೆ ಎರಡು ಬಿಂದಿಗೆ ನೀರು ದೊರೆಯುವುದು ಕಷ್ಟವಾಗಿದೆ. ಪರಿಣಾಮ ದುಬಾರಿ ಹಣ ನೀಡಿ ಖಾಸಗಿ ಟ್ಯಾಂಕರ್ಗಳಿಂದ ನೀರನ್ನು ಕೊಂಡುಕೊಳ್ಳುವಂತಾಗಿದೆ. ಈ ನೀರನ್ನು ಬಳಸುವುದರಿಂದ ಚರ್ಮ ರೋಗ, ಗಂಟಲು ಬೇನೆ, ಜ್ವರ ಮತ್ತಿತರ ರೋಗಗಳಿಗೆ ತುತ್ತಾಗುತ್ತಿದ್ದೇವೆ ಎಂದು ದೂರಿದರು.
ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಬಿಬಿಎಂಪಿ ಮುಖ್ಯ ಕಚೇರಿಯ ಮುಂದೆ ಖಾಲಿ ಕೊಡಗಳನ್ನು ಪ್ರದರ್ಶಿಸಿ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.