ಬಳ್ಳಾರಿ: ನಗರದಾದ್ಯಂತ ಸಮರ್ಪಕ ವಾಗಿ ಕುಡಿಯುವ ನೀರು ಪೂರೈಸ ಬೇಕು. ಮಹಾನಗರ ಪಾಲಿಕೆ ಹೆಚ್ಚಿಸಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ನ ಜಿಲ್ಲಾ ಘಟಕದ ಮುಖಮಡರು ನಗರದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ. 10ರಿಂದ 12 ದಿನಕ್ಕೊಮ್ಮೆ ನಿರು ಪೂರೈಸಿದರೂ ಅದಕ್ಕೆ ಸೂಕ್ತ ವೇಳೆ ಯನ್ನೇ ನಿಗದಿ ಮಾಡಿಲ್ಲ. ಇದರಿಂದಾಗಿ ಜನತೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಯಿತು.
ಅನೇಕ ಕಡೆ ಮಧ್ಯರಾತ್ರಿ, ಬೆಳಗಿನ ಜಾವದ 3 ಗಂಟೆಗೆ ನೀರು ಪೂರೈಸ ಲಾಗುತ್ತಿದೆ. ಇದರಿಂದ ಜನತೆ ನಿದ್ದೆಗೆಟ್ಟು ನೀರು ಸಂಗ್ರಹಿಸುವಂತಾಗಿದೆ. ಇನ್ನು ಕೆಲವೆಡೆ ಮಧ್ಯಾಹ್ನ ನೀರು ಪೂರೈಸು ವುದರಿಂದ ಬಡ ಕೂಲಿ ಕಾರ್ಮಿಕರು ಕೆಲಸ ಬಿಟ್ಟು ನೀರು ಸಂಗ್ರಹಿಸುವ ಅನಿವಾರ್ಯತೆ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾರ್ವಜನಿಕರಿಂದ ನೀರಿನ ತೆರಿಗೆ ಪಡೆಯುವ ಮಹಾನಗರ ಪಾಲಿಕೆ, ನೀರು ಪೂರೈಸುವಲ್ಲಿ ಕಾಳಜಿ ತೋರುತ್ತಿಲ್ಲ. ನಗರಕ್ಕೆ ನೀರೊದಗಿಸುವ ಅಲ್ಲಿಪುರ ಹಾಗೂ ಮೋಕಾ ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ ಹೇಳಲಾಗುತ್ತಿದೆ. ಬೇಸಿಗೆ ವೇಳೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂಬುದು ಗೊತ್ತಿದ್ದರೂ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ದೂರಲಾಯಿತು.
ಮುಖಂಡರಾದ ಬಿ.ರಾಮಪ್ರಸಾದ್ ಹಾಗೂ ವಿ.ಎನ್. ಗಿರಿಮಲ್ಲಪ್ಪ ಮಾತನಾಡಿ, ನಗರ ನಿವಾಸಿಗಳಿಗೆ ನೀರು ಪೂರೈಸಲು ಮುಂದಾಗಬೇಕು. ಈ ಸಂಬಂಧ ಜಿಲ್ಲಾಧಿಕಾರಿಯವರು ಮಧ್ಯ ಪ್ರವೇಶಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ರೋಗ- ರುಜಿನ ದಿಂದ ಜನರನ್ನು ರಕ್ಷಿಸಬೇಕು. ಕಸ ವಿಲೇವಾರಿಯನ್ನು ಖಾಸಗಿಯವರಿಗೆ ಒಪ್ಪಿಸದೆ ಪಾಲಿಕೆಯೇ ನೋಡಿಕೊಳ್ಳ ಬೇಕು ಎಂದು ಒತ್ತಾಯಿಸಿದರು.
ಮನೆ, ವಾಣಿಜ್ಯ ಮಳಿಗೆಗಳ ಕಂದಾಯವನ್ನು ಶೇ 30ರಿಂದ 50ರಷ್ಟು ಹೆಚ್ಚಿಸಲಾಗಿದ್ದು, ಮಾಸಿಕ ರೂ 30ರಿಂದ ರೂ 100ರವರೆಗೆ ತೆರಿಗೆ ಪಾವತಿಸ ಬೇಕಾಗಿದೆ. ಬಡಜನತೆಗೆ ಇದರಿಂದ ತೀವ್ರ ಸಮಸ್ಯೆಯಾಗಲಿದೆ ಎಂದು ಅವರು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ. ಕುಮಾರಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಹೀರ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜ್, ಪ್ರಭಾಕರ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿನೋದ್ ಕುಮಾರ್, ಎ.ಮಾನಯ್ಯ, ವೆಂಕಟರಮಣ, ಕೆ.ಗೂಳಪ್ಪ, ನಗರ ಘಟಕ ಉಪಾಧ್ಯಕ್ಷ ಜೆ.ವಿ. ಮಂಜು ನಾಥ್, ಹರಿ, ವಿವಿಧ ಘಟಕಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.