ಬೆಳಗಾವಿ: ತಾಲ್ಲೂಕಿನ 23 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮೀಕ್ಷೆ ನಡೆಸಲಾಗಿದ್ದು, ಆ ಪೈಕಿ 20 ಹಳ್ಳಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಅಂಗಡಿ ಕಾಲೇಜಿನ ವಿದ್ಯಾರ್ಥಿ ಕುನಾಲ್ ಸಾಂಬ್ರೇಕರ್ ಹೇಳಿದರು.
ದೇಶಪಾಂಡೆ ಫೌಂಡೇಶನ್ ಮಾರ್ಗದರ್ಶನದಲ್ಲಿ ಸರ್ವೆ ನಡೆಸಲಾಗಿದೆ. ಒಟ್ಟು ನಾಲ್ಕು ಬಗೆಯ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಮೂರು ಉತ್ತಮವಾಗಿಲ್ಲ ಎನ್ನಬಹುದಾದರೂ ಒಂದರಲ್ಲಿ ಮಾತ್ರ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
`ನೀರಿನಲ್ಲಿರುವ ಘನತ್ಯಾಜ್ಯ, ಪಿಎಚ್ ಮೌಲ್ಯ, ಸವಳು ನೀರು ಹಾಗೂ ಬ್ಯಾಕ್ಟೇರಿಯಾ ಕಣಗಳನ್ನು ಹೊಂದಿರುವ ಕುರಿತು ಸಮೀಕ್ಷೆ ನಡೆಸಲಾಗಿತ್ತು. ಮೊದಲ ಮೂರು ಪರೀಕ್ಷೆಗಳಲ್ಲಿ ಸ್ವಲ್ಪ ಏರು-ಪೇರಿದೆ. ಆದರೆ ಬ್ಯಾಕ್ಟೇರಿಯಾ ಹೊಂದಿರುವ ಬಗೆಗೆ ನಡೆಸಿದ ಸಮೀಕ್ಷೆಯಲ್ಲಿ ಬ್ಯಾಕ್ಟೇರಿಯಾ ಕಣಗಳನ್ನು ಹೊಂದಿರುವುದು ಆತಂಕಕಾರಿಯಾಗಿದೆ~ ಎಂದು ಅವರು ಹೇಳಿದರು.
`ತಾಲ್ಲೂಕಿನ ನಂದಿಹಳ್ಳಿ, ಗೌಂಡವಾಡ, ಯಮನಾಪುರದ ನೀರು ಕುಡಿಯಲು ಯೋಗ್ಯವಾಗಿದ್ದು, ಉಳಿದಂತೆ ದೇಸೂರ, ಯಳ್ಳೂರ, ಹೊನಗಾ, ಕಾಕತಿ, ಮಣ್ಣೂರು, ನಾವಗೆ, ಗೋಜಗೆ, ಬೆನ್ನಾಳಿ, ಕಂಗ್ರಾಳಿ ಬಿಕೆ ಮುಂತಾದ ಗ್ರಾಮಗಳ ನೀರು ಯೋಗ್ಯವಾಗಿಲ್ಲ~ ಎಂದರು.
`ಬಹುತೇಕ ರೋಗಗಳು ನೀರಿನ ಮೂಲಕವೇ ಬರುತ್ತವೆ. ರೋಗ ಹರಡುವ ಬ್ಯಾಕ್ಟೇರಿಯಾ ಹೊಂದಿರುವ ನೀರು ಈ ಗ್ರಾಮಗಳಲ್ಲಿ ಲಭ್ಯವಾಗಿದೆ. ಇದರಿಂದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ~ ಎಂದು ಅವರು ಹೇಳಿದರು.
`ಗ್ರಾಮಗಳ ಜನರಿಗೆ ಶುದ್ಧ ನೀರನ್ನು ಕುಡಿಯುವುದರಿಂದ ಆಗುವ ಲಾಭ ಹಾಗೂ ಕಲುಷಿತ ನೀರು ಕುಡಿಯುವುದರಿಂದ ಆಗುವ ತೊಂದರೆಗಳ ಬಗೆಗೆ ಜಾಗೃತಿ ಮೂಡಿಸಲಾಗುವುದು. ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು~ ಎಂದು ಅವರು ಮನವಿ ಮಾಡಿದರು.
ಸಹಪಾಠಿ ದೀಪಕ. ಜೆ ಹಾಜರಿದ್ದರು.