ನೀರು ಎಲ್ಲ ಜೀವಿಗಳಿಗೂ ಬೇಕು. ನೀರು ನಿಸರ್ಗ ನಿರ್ಮಿತ. ಅದರ ಮೇಲೆ ಯಾರು ಪ್ರಭುತ್ವ ಸ್ಥಾಪಿಸಲು ಹೊರಟರೂ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಇಲ್ಲಿಯವರೆಗೆ ಜನರಿಗೆ ನೀರು ಪೂರೈಸುವ ಕೆಲಸವನ್ನು ಪಂಚಾಯಿತಿಗಳು, ಪುರಸಭೆಗಳು, ನಗರ ಸಭೆಗಳು, ನಗರ ಪಾಲಿಕೆಗಳು ಮಾಡುತ್ತಿದ್ದವು.
ಈಗಾಗಲೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗುಲ್ಬರ್ಗಾ ಮತ್ತು ಮೈಸೂರು ನಗರಗಳ ಕುಡಿವ ನೀರಿನ ವ್ಯವಸ್ಥೆಯನ್ನು ಖಾಸಗಿ ಕಂಪೆನಿಗೆ ವಹಿಸಲಾಗಿದೆಯಂತೆ. ಮುಂದೆ ಬೆಂಗಳೂರು, ಮಂಗಳೂರು, ಬಳ್ಳಾರಿ, ಹೊಸಪೇಟೆ, ಸೇರಿದಂತೆ 16 ನಗರಗಳನ್ನು ಮೊದಲ ಹಂತದಲ್ಲಿ ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆಯೆಂಬ ಮಾತುಗಳು ಕೇಳಿ ಬರುತ್ತಿವೆ.
ವಿದ್ಯುತ್ತಿಗೆ ಮೀಟರ್ ಅಳವಡಿಸಿದಂತೆ ನಳಗಳಿಗೂ ಮೀಟರ್ ಜೋಡಿಸಲಾಗುತ್ತದೆ. ನೀರು ಬಳಸಿದಷ್ಟು ಲೆಕ್ಕಾಚಾರದ ಮೇಲೆ ಹಣ ನೀಡಬೇಕಾಗುತ್ತದೆ. ರೈತರು ಕೆಲವು ಸಂದರ್ಭಗಳಲ್ಲಿ ಎಮ್ಮೆ, ಆಕಳು ಹಾಗೂ ಕರುಗಳಿಗೆ ಮನೆಯಲ್ಲಿಯೇ ನೀರು ಕುಡಿಸುತ್ತಾರೆ.
ಇಷ್ಟರಲ್ಲಿ ಅಮೆರಿಕದ ನಿಯೋಗ ಭಾರತಕ್ಕೆ ಬರಲಿದ್ದು ಅದು ಮೊದಲಿಗೆ ಕರ್ನಾಟಕದ ಬೆಂಗಳೂರಿನಲ್ಲಿ ರಾಜ್ಯದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ದುಂಡು ಮೇಜಿನ ಪರಿಷತ್ತು ನಡೆಸಲಿದೆ.
ಸರ್ಕಾರ ಒಂದು ವೇಳೆ ಖಾಸಗಿ ಕಂಪೆನಿಗೆ ನೀರಿನ ವ್ಯವಸ್ಥೆಯನ್ನು ವಹಿಸಿದರೆ ಜನರು ದುಬಾರಿ ಹಣ ಕೊಟ್ಟು ನೀರು ಕೊಂಡುಕೊಳ್ಳಬೇಕಾಗುತ್ತದೆ. ಬಹುಪಾಲು ಬಡವರು ಮತ್ತು ಮಧ್ಯಮ ವರ್ಗದವರೇ ತುಂಬಿರುವ ಭಾರತದಲ್ಲಿ ಅದು ಸಾಧ್ಯವಾಗದು. ಈಗಾಗಲೇ ಬಹುರಾಷ್ಟ್ರೀಯ ಕಂಪೆನಿಗಳು ಬಾಟಲಿಯಲ್ಲಿ ನೀರು ಮಾರಿ ಸುಲಿಗೆ ಮಾಡುತ್ತಿವೆ. ಜನ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.