ಹರಪನಹಳ್ಳಿ: ತಾಲ್ಲೂಕು ಹಾರಕನಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು)ದ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಬುಧವಾರ ಪಂಚಾಯ್ತಿ ಕಚೇರಿ ಮುಂದೆ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಬಿ. ಹಾಲೇಶನಾಯ್ಕ ಮಾತನಾಡಿ, ತಾಲ್ಲೂಕು ಭೀಕರ ಬರಗಾಲದ ಕಡುಕೋಪಕ್ಕೆ ತುತ್ತಾಗಿದೆ. ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಹನಿ ನೀರಿಗೂ ಮೈಲುಗಟ್ಟಲೆ ತೋಟಗಳಿಗೆ ಎಡತಾಕಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
ತುತ್ತು ಕೂಳಿಗಾಗಿ ಕಾಫಿಸೀಮೆ, ಗೋವಾ ಸೇರಿದಂತೆ ವಿವಿಧ ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ಜನ ಗುಳೆ ಹೋಗುತ್ತಿದ್ದಾರೆ. ವಿದ್ಯುತ್ ಬಿಲ್ ನೆಪದಲ್ಲಿ ಪಡಿತರ ಚೀಟಿ ರದ್ದುಪಡಿಸುವ ಮೂಲಕ ಬಡವರು ತಿನ್ನುವ ಅನ್ನಕ್ಕೂ ಸಂಚಕಾರ ತಂದಿದ್ದಾರೆ. ಈ ಬಗ್ಗೆ ನಿಗಾವಹಿಸಿ, ಕಾಲಕಾಲಕ್ಕೆ ಸೂಕ್ತ ನಿರ್ದೇಶನ ನೀಡಬೇಕಿದ್ದ ಶಾಸಕರು ನಾಪತ್ತೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಬೇವಿನಹಳ್ಳಿ ವೆಂಕಟೇಶ್, ಕೆ.ಟಿ. ರಾಜಪ್ಪ, ಸೇವ್ಯಾನಾಯ್ಕ, ಸೋಮ್ಲಾನಾಯ್ಕ, ಕೆ. ನಾಗರಾಜ, ಎಚ್. ರಹಮತ್ವುಲ್ಲಾ, ಸೋಮ್ಲಿಬಾಯಿ, ದೇಮಿಬಾಯಿ, ಸೋನಾಬಾಯಿ, ಯಂಕಿಬಾಯಿ, ಪಾಲಿ ಲಕ್ಯಾನಾಯ್ಕ, ಎಲ್. ಲಕ್ಷ್ಮಣನಾಯ್ಕ, ರವಿ, ಟಿ.ವೈ. ಮಂಜು, ಶಿವರಾಜ್, ಹೇಮೇಶ್ ಬಡಿಗೇರ್ ಪುಟ್ಟನಾಯ್ಕ ಇತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.