ಅಮೀನಗಡ:ಸಮೀಪದ ಕಲ್ಲಗೋನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮುಖ್ಯ ಶಿಕ್ಷಕರಾಗಿರುವ ರವಿ ಮಹಾದೇವ ರಜಪೂತ ಎಂಬುವ ವರು ಪ್ರತಿದಿನ ಶಾಲೆಗೆ ಮಧ್ಯ ಸೇವಿಸಿ ಶಾಲೆಗೆ ಬರುವುದು, ಮಕ್ಕಳಿಗೆ ಹೊಡೆ ಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅಸಮರ್ಪಕವಾಗಿ ಬಿಸಿಊಟ ವಿತರಣೆ ಹಾಗೂ ಕಿರುಕುಳಗಳಿಗೆ ಬೇಸತ್ತ ಗ್ರಾಮಸ್ಥರು, ಪಾಲಕರು, ಶಾಲಾ ಸುಧಾರಣಾ ಸಮಿತಿ ಸದಸ್ಯರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.
ಕುಡುಕ ಶಿಕ್ಷಕ: ಹಲವಾರು ವರ್ಷಗ ಳಿಂದ ಇದೇ ಶಾಲೆಯಲ್ಲಿ, ಕಾರ್ಯ ನಿರ್ವಹಿಸುತ್ತಿರುವ ರವಿ ಮಹಾದೇವ ರಜಪೂತ ಬಡ್ತಿ ಹೊಂದಿ ಮುಖ್ಯಶಿಕ್ಷಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ವರ್ಷಾನುಗಟ್ಟಲೇ ಗ್ರಾಮಸ್ಥರು, ಪಾಲಕರು, ಎಸ್ಡಿಎಂಸಿ ಸದಸ್ಯರು ಬುದ್ಧಿ ಹೇಳಿದರೂ ನಿರ್ಲಕ್ಷಿಸುತ್ತಿದ್ದ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಮಲ್ಲಪ್ಪ ವೀರಬಸಪ್ಪ ಗೌಡರ ಹೇಳಿದರು.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಿಆರ್ಸಿ, ಬಿಆರ್ಸಿಗಳಿಗೆ ಹಲವು ವಿನಂತಿ, ಲಿಖಿತ ಮೂಲಕ ದೂರು ಸಲ್ಲಿಸಿದರೂ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಸರ್ಕಾರ ಹಲವಾರು ಯೋಜ ನೆಗಳ ಮೂಲಕ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುತ್ತಿದೆ. ಇಂಥ ಶಿಕ್ಷಕರಿಂದ ಶೈಕ್ಷಣಿಕ ಪ್ರಗತಿ ಸಾಧ್ಯವೇ ಇಂಥದರಲ್ಲಿ ನಮ್ಮ ಮಕ್ಕಳು ಪಾಠ ಕಲಿಯಬೇಕೆ?. ಮೂರು ತಿಂಗಳು, ವರ್ಷ ಕಳೆದರೂ ಶಾಲೆಯ ಅಭಿವೃದ್ಧಿ ಬಗ್ಗೆ ಒಂದೂ ಸಭೆಯನ್ನು ಕರೆಯುವುದಿಲ್ಲ ಎಂದು ಗೌಡರ ತಿಳಿಸಿದರು.
ಶಾಲೆಗೆ ಯಾವುದಾದರೂ ಸಮಸ್ಯೆ ಬಂದಾಗ ನಾವಾಗೇ ಹೇಳಿದರೂ, ದೂರವಾಣಿ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ, ಕುಡಿದು ಬಂದು ಅಸಭ್ಯವಾಗಿ ವರ್ತಿಸುವುದು. ಯಾವ ಅಧಿಕಾರಿಯೂ ನನ್ನನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ದುರಹಂಕಾರದ ಮಾತುಗಳನ್ನಾಡುವುದು ಇಂಥ ವರ್ತನೆಗಳಿಂದ ಬೇಸತ್ತು ಶಾಲೆಗೆ ಬೀಗ ಹಾಕುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಈ ಶಾಲೆಯಿಂದ ಈತನನ್ನು ಬೇರೆ ಕಡೆ ವರ್ಗಾಹಿಸಿ ಉತ್ತಮ ಶಿಕ್ಷಕರನ್ನು ನೇಮಿಸುವವರೆಗೂ ಶಾಲೆಯ ಬೀಗ ತೆರೆಯುವುದಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಶಾಲೆಯ ಮುಖ್ಯಶಿಕ್ಷಕರು ಪ್ರತಿದಿನ ಕುಡಿದು ಶಾಲೆಗೆ ಬರುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆಂದು ವಿದ್ಯಾರ್ಥಿ ನಿಂಗಮ್ಮ ಮಾಗುಂಡಪ್ಪನವರ್, ಮುತ್ತವ್ವ ಗೌಡರ, ವಿಜಯಲಕ್ಷ್ಮೀ ಜೈನರ, ರೇಖಾ ಮಾಗುಂಡಪ್ಪ, ಸೋಮಲಿಂಗ ನಾಗರಾಳ, ಯಮನೂರ ಗೌಡರ ಮುಂತಾದವರು ಆರೋಪಿಸಿದರು.
ತಕ್ಷಣವೇ ಸೂಕ್ತ ಕ್ರಮದ ಬಗ್ಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ಒಡೆಯರ, ಪೂರ್ಣ ಮಾಹಿತಿ ಪಡೆದು ವರದಿ ಬಂದ ತಕ್ಷಣವೇ ತಪ್ಪು ಮಾಡಿದ ಶಿಕ್ಷಕನ ಮೇಲೆ ಯೋಗ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಅಧಿಕಾರಿಗಳ ಭರವಸೆ ತೆರೆದ ಶಾಲೆಯ ಬೀಗ ಗುರುವಾರ ಶಾಲೆ ಪ್ರಾರಂಭಕ್ಕೆ ಬೀಗ ಹಾಕಿ ಪ್ರತಿಭಟಿಸಿದ್ದ ಗ್ರಾಮಸ್ಥರಿಗೆ, ಹುನಗುಂದ ಕ್ಷೇತ್ರ ಶಿಕ್ಷಣ ಇಲಾಖೆಯಿಂದ ಬಂದ ಸಿಬ್ಬಂದಿ ವರ್ಗ ನೀಡಿದ ಭರವಸೆ ಮೇರೆಗೆ ಶಾಲೆಯ ಬೀಗ ತೆಗೆದು, ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಶೇಖವ್ವ ಗೌಡರ, ಕೆಂಚಮ್ಮ ಬಿ.ಗೌಡರ, ಸಿದ್ದಪ್ಪ ಗೌಡರ, ಮರಿಯವ್ವ ಹ.ಮಾದರ, ಸಂಗಪ್ಪ ಬ.ಗೌಡರ, ಬಸನಗೌಡ ಯ.ಗೌಡರ, ಕೆ.ಎಸ್. ಗೌಡರ, ಬಿ.ಎಂ. ನನ್ನೂರ, ಎಚ್.ಎಸ್. ಮರಿಗೌಡರ ಮುಂತಾದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.