ಮಂಗಳೂರು: ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಶತಮಾನೋತ್ಸವದ ಪ್ರಯುಕ್ತ ಬ್ರಹ್ಮಕಲಶೋತ್ಸವ ಶನಿವಾರ ನಡೆಯಲಿದ್ದು, ಹಲವು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮಹಾ ಅನ್ನಸಂತರ್ಪಣೆ ಕ್ಷೇತ್ರದಲ್ಲಿ ನಡೆಯಲಿದೆ.
ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ಪ್ರಕಾಶಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮಣ ಶಾಂತಿ, ದೇವಸ್ಥಾನದ ನವೀಕರಣದ ರೂವಾರಿ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.
ಚಂಡಿಕಾ ಹೋಮ, ರುದ್ರ ಹೋಮ ಸಹಿತ ಹಲವಾರು ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಶುಕ್ರವಾರ ಸಹಸ್ರ ಕುಂಭಗಳನ್ನು ಇರಿಸುವ ಆಕರ್ಷಕ ಮಂಡಲಗಳನ್ನು ರಚಿಸುವ ಕಾರ್ಯ ನಡೆಯಿತು. ಜತೆಗೆ ಚಂಡಿಕೆ, ಶಿವನ ಪ್ರತಿರೂಪದಂತಿರುವ ಮಂಡಲಗಳೂ ಗಮನ ಸೆಳೆದಿವೆ.
ಶನಿವಾರ ಮಧ್ಯಾಹ್ನದಿಂದ ಅನ್ನಸಂತರ್ಪಣೆ ಆರಂಭವಾಗಲಿದ್ದು, ಭಾನುವಾರ ಬೆಳಿಗನ ಜಾವದವರೆಗೂ ಇದು ಮುಂದುವರಿಯಲಿದೆ. ದೇವಸ್ಥಾನಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಇರಲಿದೆ.
ಶಿವನಿಗೆ ವಿಶೇಷ ಅಲಂಕಾರ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.