ಭಾಲ್ಕಿ: ಕುರಿ ಮತ್ತು ಆಡುಗಳ ಹಕ್ಕೊತ್ತಾಯಕ್ಕಾಗಿ ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ಕುರಿ ಮತ್ತು ಆಡುಗಳು ಹಾಗೂ ಕುರುಬ ಸಮುದಾಯದ ಮುಖಂಡರು ಪಾಲ್ಗೊಳ್ಳುವ ಮೂಲಕ ಬೊಮ್ಮಗೊಂಡೇಶ್ವರ ಚೌಕ್ನಿಂದ ಮೆರವಣಿಗೆ ಆರಂಭಗೊಂಡಿತು. ತಿಂಥಿಣಿಯ ಕಾಗಿನೆಲೆ ಕನಕ ಗುರುಪೀಠದ ಪೂಜ್ಯ ಸಿದ್ಧರಾಮಾನಂದ ಸ್ವಾಮೀಜಿ ರ್ಯಾಲಿಯನ್ನು ಉದ್ಘಾಟಿಸಿದರು.
ಅಂಬೇಡ್ಕರ್ ವೃತ್ತ, ಗಾಂಧಿ ಚೌಕ್, ಬಸವೇಶ್ವರ ವೃತ್ತದ ಮೂಲಕ ತಹಸೀಲ್ದಾರ ಕಚೇರಿಗೆ ಮೆರವಣಿಗೆ ತೆರಳಿ ಅಲ್ಲಿ ಬೃಹತ್ ಸಭೆ ನಡೆಸಲಾಯಿತು.
ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ಕುರುಬರ ಸಹಕಾರ ಸಂಘಕ್ಕೆ ಕುರಿಗಳನ್ನು ಮೇಯಿಸಲು ಪ್ರತಿಯೊಂದು ತಾಲ್ಲೂಕಿನಲ್ಲಿ ಸರ್ಕಾರದಿಂದ 25 ಎಕರೆ ಜಮೀನು ಕೊಡಬೇಕು. ದುಡಿಮೆ ಬಂಡವಾಳವಾಗಿ ಸಂಘಗಳಿಗೆ ರೂ. 2ಲಕ್ಷ ಮಂಜೂರು ಮಾಡಬೇಕು. ಕುರಿ, ಆಡು ಸಾಕಾಣಿಕೆಗೆ ಶೇ. 3ರ ಬಡ್ಡಿ ದರದಲ್ಲಿ ಬ್ಯಾಂಕುಗಳಿಂದ ಸಾಲ ಕೊಡಿಸಬೇಕು ಎಂದರು.
ಕುರಿಕಾರರಿಗೆ ರಿಯಾಯಿತಿ ದರದಲ್ಲಿ ಮೇವು ವಿತರಣೆ, ಪ್ರಕೃತಿ ವಿಕೋಪದಲ್ಲಿಯಾಗಲಿ, ಅಸಹಜ ಸಾವುಗಳಿಂದ ಕುರಿಗಳು ಸತ್ತರೆ ಕೂಡಲೇ ಪರಿಹಾರ ನೀಡಬೇಕು. ಕುರಿ ಕಾಯುವ ಕುಟುಂಬದವರಿಗೆ ಆರೋಗ್ಯ ವಿಮೆ ಜಾರಿಗೊಳಿಸುವಂತೆ ಆಗ್ರಹಿಸಿದರು.
ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಜ ಮಲ್ಲೇಶಿ ಮಾತನಾಡಿ, ನರಿ, ನಾಯಿಗಳಿಂದ ಕುರಿಗಳ ರಕ್ಷಣೆಗಾಗಿ ಆಯುಧಗಳ ಪರವಾನಗಿ ಒದಗಿಸಬೇಕು. ಡಿಸಿಸಿ ಬ್ಯಾಂಕ್ನಲ್ಲಿ ಕುರಿ ಮತ್ತು ಉಣ್ಣೆ ನೇಕಾರರ ಸಹಕಾರ ಸಂಘದ ಒಬ್ಬ ಸದಸ್ಯರಿಗೆ ನಾಮ ನಿರ್ದೇಶನ ನೀಡಬೇಕು. ಕುರುಬರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ನೀಡಬೇಕು ಎಂದು ಒತ್ತಾಯಿಸಿದರು.
ಚಂದ್ರಕಾಂತ ನೇಳಗೆ, ಮಾಳಸ್ಕಾಂತ ವಾಘೆ, ಸಂತೋಷ ಜಬಾಡೆ, ಅಂಬರೀಶ ಮಲ್ಲೇಶಿ, ಸುನಿಲ ಕಪಲಾಪುರೆ, ರೇವಣಪ್ಪ ಆಪ್ಟೆ, ಲೋಕೇಶ ಜಬಾಡೆ, ಶಾಲಿವಾನ ವಳಸಂಗೆ, ಬಾಲಾಜಿ, ರಾಜಕುಮಾರ ಮೇತ್ರೆ, ಬಸವರಾಜ ಧನ್ನೂರೆ, ಝರೆಪ್ಪ ಮಲ್ಲೇಶಿ, ನಾಗಮ್ಮ ನೆಲವಾಡೆ, ಸತ್ಯಕಲಾ ಬರ್ಮಾ, ಮಮತಾ, ಭಾರತಬಾಯಿ ವಗ್ಗೆ, ಭೀಮಲಾಬಾಯಿ ಬಿರಾದಾರ ಸೇರಿದಂತೆ ಜಿಲ್ಲೆಯ ವಿವಿಧ ಕುರುಬ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.