ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರಹಳ್ಳಿಯಲ್ಲಿ ಸುಗ್ಗಿ ಸಂಭ್ರಮ

Last Updated 21 ಜನವರಿ 2011, 14:10 IST
ಅಕ್ಷರ ಗಾತ್ರ

ಸುಗ್ಗಿಯ ಸಿರಿ ಬಂತು... ಹಿಗ್ಗಿನ ದಿನ ಬಂತು.... ಸಂಕ್ರಾಂತಿಯ ಸಮಯದಲ್ಲಿ ಬರುವ ಸುಗ್ಗಿಯ ಹಬ್ಬವನ್ನು ನಮ್ಮ ಹಳ್ಳಿಗರು ಬರಮಾಡಿಕೊಳ್ಳುವುದು ಹೀಗೆ. ಕಾಂಕ್ರೀಟ್ ನಾಡಿನ ಕಂದಮ್ಮಗಳಿಗೆ ಸುಗ್ಗಿಯ ಹಬ್ಬ ಪರಿಚಯಿಸುವುದು ಬೇಡವೇ?
ಅದಕ್ಕಾಗಿಯೇ ಕಮಲಾನಗರದ ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಭಾನುವಾರ ಸುಗ್ಗಿ ಮೇಳ ಏರ್ಪಡಿಸಿದೆ. ಸ್ಪಂದನದ ಅಧ್ಯಕ್ಷ ಮತ್ತು ಬಿಬಿಎಂಪಿ ಸದಸ್ಯ ಎಂ. ಶಿವರಾಜು ಸುಗ್ಗಿ ಸಂಭ್ರಮದ ರೂವಾರಿ.

ಸಿಟಿಯಲ್ಲಿ ಸಿಗದ ಹಳ್ಳಿಯ ಸೊಗಡಿನ ಸಂಗಮ ಅಲ್ಲಿರುತ್ತದೆ. ಅವರೆಕಾಯಿ, ಕಡಲೇಕಾಯಿ ಸುಲಿಯುವ, ಕಟ್ಟೆಬಾವಿಯಲ್ಲಿ ನೀರು ಸೇದುವ, ರಾಗಿ ಬೀಸುವ, ಭತ್ತ ಕುಟ್ಟುವ, ರಾಗಿಯನ್ನು ಸೇರಿನಿಂದ ಚೀಲದಲ್ಲಿ ತುಂಬುವ, ಕಬ್ಬು ತಿನ್ನುವ, ಕೋಳಿ ಹಿಡಿಯುವ, ಬೆರಣಿ ತಟ್ಟುವ ಮತ್ತು ಮಜ್ಜಿಗೆ ಕುಡಿಯುವ ಸ್ಪರ್ಧೆ ಇರುತ್ತದೆ.

ಹೊಲ ಉಳುವ, ಬೀಜ ಬಿತ್ತುವ, ಬಳೆಗಾರ ಬಳೆ ತೊಡಿಸುವ, ಮುತ್ತೈದೆಯರು ಬಾಗಿನ ನೀಡುವ, ಊರಮ್ಮನ ದೇವಸ್ಥಾನದ, ಹಳ್ಳಿಯ ಸಿನಿಮಾ ಟೆಂಟಿನ, ಬೊಂಬೆಯಾಟದ ಪ್ರದರ್ಶನಗಳು ಇರುತ್ತವೆ. ಜಾನಪದ ಕಲಾವಿದರು, ದೊಂಬರಾಟ, ಕೋಲೆ ಬಸವ, ಹಾಸ್ಯ ವೇಷಧಾರಿಗಳು ಜನರನ್ನು ರಂಜಿಸಲಿದ್ದಾರೆ. ಎತ್ತಿನ ಬಂಡಿ ಸವಾರಿ, ಕುದುರೆ ಸವಾರಿ, ಒಂಟೆ ಸವಾರಿ ಮಕ್ಕಳಿಗೆ ಪ್ರಿಯವಾಗಲಿವೆ.

ಇದೇ ಸಂದರ್ಭದಲ್ಲಿ ಬೆಳಿಗ್ಗೆ 9 ಗಂಟೆಯಿಂದ 4 ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ. ಮಾಲಿನ್ಯದ ಅನಾಹುತ, ಹಬ್ಬಗಳು, ಹಳ್ಳಿಯ ಸೊಗಡು, ಪ್ರಾಣಿಗಳ ರಕ್ಷಣೆ, ಪರಿಸರ ರಕ್ಷಣೆ, ಹಬ್ಬಗಳು, ಪ್ರಥಮ ಚಿಕಿತ್ಸೆ ಈ ವಿಷಯಗಳ ಮೇಲೆ ಚಿತ್ರ ಬಿಡಿಸಬಹುದು.

ಸಂಜೆ 6.30ರಿಂದ ರಿಚರ್ಡ್ ಲೂಯಿಸ್, ಮೈಸೂರು ಆನಂದ್, ಬಸವರಾಜ್ ಮಹಾಮನೆ ಮತ್ತು ಇಂದುಶ್ರೀ ಅವರಿಂದ ಹಾಸ್ಯ ಸುಗ್ಗಿ.
ಹಾಡುಗಾರಿಕೆ, ನೃತ್ಯ ಪ್ರದರ್ಶನ, ಚಿತ್ರಕಲೆಯಲ್ಲಿ ಪಾಲ್ಗೊಳ್ಳುವವರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ದೂ. 2322 2283

ಸ್ಥಳ: ಕೆಂಪೇಗೌಡ ಆಟದ ಮೈದಾನ, ಕುರುಬರಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT