ಕುಷ್ಟಗಿ: ಬರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರ ಕುರ್ಚಿಗಾಗಿ ಕಚ್ಚಾಟದಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನೂತನ ನಾಯಕ ಎಸ್.ಆರ್.ಪಾಟೀಲ ತಿಳಿಸಿದರು.
ಮಂಗಳವಾರ ಇಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಕದನ ನಾಗರಿಕ ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ, ಈ ಜಗಳ ಆಂತರಿಕವಾದರೂ ರಾಜ್ಯದ ಕಲ್ಯಾಣಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು.
ಭೀಕರ ಬರ ಆವರಿಸಿರುವ ಹಿನ್ನೆಲೆಯಲ್ಲಿ ಶಾಲು, ಸನ್ಮಾನ ಸಂಸ್ಕೃತಿಯಿಂದ ದೂರ ಉಳಿಯುವುದಾಗಿ ತಿಳಿಸಿದ ಅವರು, ಬರ ಪರಿಸ್ಥಿತಿ ನೀಗುವವರೆಗೂ ತಮಗೆ ದೊರೆಯುವ ಸಂಬಳ ಇತರೆ ಯಾವುದೇ ಸೌಲಭ್ಯವನ್ನೂ ಪಡೆಯುವುದಿಲ್ಲ ಎಂದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಗುಂಪು ಕಾಂಗ್ರೆಸ್ಗೆ ಸೇರುವ ಯಾವುದೇ ವಿಚಾರ ಕಾಂಗ್ರೆಸ್ ಮುಂದಿಲ್ಲ ಎಂದರು. ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಕೆ.ಶರಣಪ್ಪ, ದೇವೇಂದ್ರಪ್ಪ ಬಳೂಟಗಿ ಉಪಸ್ಥಿತರಿದ್ದರು.