ಭದ್ರಾವತಿ: ಅಧಿಕಾರ ದಾಹಕ್ಕಾಗಿ, ಕುರ್ಚಿ ಆಸೆಗಾಗಿ ಮಂಗಳವಾರ ಭದ್ರಾವತಿ ಬಂದ್ಗೆ ಕರೆ ನೀಡಿಲ್ಲ. ಕ್ಷೇತ್ರದ ಎರಡು ಕಾರ್ಖಾನೆ ಉಳಿವು, ಅಭಿವೃದ್ಧಿಗಾಗಿ ಬಂದ್ಗೆ ಕರೆ ನೀಡಲಾಗಿದೆ ಎಂದು ಶಾಸಕಬಿ.ಕೆ. ಸಂಗಮೇಶ್ವರ ಹೇಳಿದರು. ಬಿಜೆಪಿ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಮುಖಂಡರು ಸಾಕಷ್ಟು ಅಭಿವೃದ್ಧಿ ನಡೆದಿದ್ದರೂ ದಾರಿ ತಪ್ಪಿಸುವ ಸಲುವಾಗಿ ಶಾಸಕರುಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿರುವುದಕ್ಕೆ ಸಂಗಮೇಶ್ವರಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ವಿರುದ್ಧ ಹಗರಣಗಳ ಸರಮಾಲೆ ಎದುರಾದರೂ ರಾಜ್ಯ ಬಂದ್ಗೆ ಕರೆ ನೀಡಿ ಸಾರ್ವಜನಿಕರ ಜೀವನದ ಜತೆ ಚೆಲ್ಲಾಟ ನಡೆಸಿದ ಬಿಜೆಪಿ ಮುಖಂಡರು, ಕ್ಷೇತ್ರದ ಸಮಸ್ಯೆ ಹಾಗೂ ಇಲ್ಲಿನ ಜನರ ಕಷ್ಟಗಳ ಗಮನ ಸೆಳೆಯಲು ಕರೆ ನೀಡಿರುವ ಬಂದ್ಗೆ ವಿರೋಧ ವ್ಯಕ್ತ ಮಾಡಿರುವುದು ಖಂಡನೀಯ ಎಂದರು. ಎಂಪಿಎಂ ಹಾಗೂ ವಿಐಎಸ್ಎಲ್ ಎರಡು ಕಾರ್ಖಾನೆಗಳು ಇಲ್ಲಿನ ಜನರ ಜೀವನಾಡಿ. ಎಂಪಿಎಂ ಅಭಿವೃದ್ಧಿಗೆ ಕಿಂಚಿತ್ತೂ ಆಸಕ್ತಿ ವಹಿಸದ ರಾಜ್ಯ ಸರ್ಕಾರ ರೋಗಗ್ರಸ್ತ ಕಾರ್ಖಾನೆ ಸಾಲಿಗೆ ಅದನ್ನು ಸೇರಿಸಿದೆ ಎಂದು ದೂರಿದರು.
ವಿಐಎಸ್ಎಲ್ ಕಾರ್ಖಾನೆಗೆ ಆವಶ್ಯವಿರುವ ಗಣಿ ಮಂಜೂರು ಮಾಡದ ಸರ್ಕಾರ ನೂರಾರು ಎಕರೆ ಭೂಮಿಯನ್ನು ಶಿಫಾರಸು ಮಾಡಿದೆ. ಈ ಬೇಡಿಕೆಗಳ ಈಡೇರಿಕೆಗೆ ನಾನು ಹೋರಾಟ ಮಾಡಿದರೆ ಇವರಿಗೆ ತಪ್ಪು ಕಾಣುತ್ತದೆ. ಅವರ ರಾಜ್ಯ ಬಂದ್ ಮಾತ್ರ ಸ್ವಹಿತಾಸಕ್ತಿ ಕಾಪಾಡಲು ನಡೆದಿದೆ. ಅದಕ್ಕೆ ಜನ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದರು. ನಾವು ನೀಡಿರುವ ಬಂದ್ಗೆ ಜನರು ಉತ್ತಮ ಪ್ರತಿಕ್ರಿಯೆ ನೀಡಲಿದ್ದಾರೆ.
ಇದರ ತೀರ್ಮಾನ ಆಗಿದ್ದು, ತಿಂಗಳುಗಳ ಹಿಂದೆ. ಆದರೆ, ಬಿಜೆಪಿ ಅವರ ತರಹ ರಾತ್ರೋರಾತ್ರಿ ಬಂದ್ ಘೋಷಿಸಿ ತೊಂದರೆ ಕೊಡುವ ಜಾಯಮಾನ ನಮ್ಮ ಪಕ್ಷದ್ದಲ್ಲ ಎಂದರು.ಮಂಗಳವಾರ ಮಧ್ಯಾಹ್ನ 3ಕ್ಕೆ ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕಾಂಗ್ರೆಸ್ ಮುಖಂಡರಾದ ಕಾಗೋಡು ತಿಮ್ಮಪ್ಪ, ವಿ.ಎಸ್. ಉಗ್ರಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದಮುಖಂಡರಾದ ಕಣ್ಣಪ್ಪ, ಅಣ್ಣೋಜಿರಾವ್ ಉಪಸ್ಥಿತರಿದ್ದರು. ಕರಪತ್ರ: ತಾಲ್ಲೂಕು ಬಿಜೆಪಿ ಘಟಕ ಮಂಗಳವಾರದ ಬಂದ್ಗೆ ಸಹಕಾರ ನೀಡದಂತೆ ಕಾರ್ಖಾನೆ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ವಿವರಣೆ ನೀಡಿ ಕರಪತ್ರಹಾಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.