ಕಾರವಾರ: ರಾಜ್ಯದಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯ ಹೊರತು ಪಡಿಸಿದರೆ ಉಳಿದ ಯಾವ ವಿಶ್ವವಿದ್ಯಾಲಯದಲ್ಲಿಯೂ ಕುಲಪತಿ ಹುದ್ದೆ ಖಾಲಿ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಆರ್. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗಾಗಿ ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಅಧ್ಯಕ್ಷತೆಯಲ್ಲಿ ‘ಸರ್ಚ್ ಕಮಿಟಿ‘ ನೇಮಕ ಮಾಡಲಾಗಿದೆ. ಈ ಸಮಿತಿ ಯಾರನ್ನು ಆಯ್ಕೆಮಾಡಿ ಸೂಚಿಸುತ್ತದೆಯೋ ಅವರನ್ನು ನೇಮಕ ಮಾಡುತ್ತೇವೆ ಎಂದರು.
ಇವರನ್ನೇ ಕುಲಪತಿ ಹುದ್ದೆಗೆ ಆಯ್ಕೆ ಮಾಡಿ ಎಂದು ಹೇಳುವ ಅಧಿಕಾರ ನನಗಿಲ್ಲ ಎಂದು ಸಚಿವ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದರು.
ಕುಲಪತಿಗಳ ನೇಮಕಾತಿಗೂ ನಮಗೂ ಯಾವುದೇ ಸಂಬಂಧಇಲ್ಲ. ರಾಜ್ಯಪಾಲ ಎಚ್.ಆರ್. ಭಾರಧ್ವಾಜ್ ಅವರು ಹಿರಿಯರಿದ್ದಾರೆ. ಯಾವ ಉದ್ದೇಶ ಇಟ್ಟುಕೊಂಡು ಅವರು ಸಚಿವರ ಕಾರ್ಯವೈಖರಿ ಬಗ್ಗೆ ಮಾತನಾಡಿದರೋ ಗೊತ್ತಿಲ್ಲ. ಗೌರವ ಸ್ಥಾನದಲ್ಲಿರುವ ಅವರ ಬಗ್ಗೆ ಹೆಚ್ಚಿಗೆ ಮಾತನಾಡುವುದು ಸರಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.