ದೇವನಹಳ್ಳಿ : ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕುವೆಂಪು ಅವರ ವಿಶ್ವ ಮಾನವ ಸಂದೇಶದ ಬಗ್ಗೆಎಲ್ಲೆಡೆ ಪ್ರಚಾರದ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಖಜಾಂಚಿ ಯ.ಚಿ.ದೊಡ್ಡಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೆಟ್ಟಕೋಟೆ ರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರ ಸಾಹಿತ್ಯ ಸತ್ವ ಭರಿತ ಮತ್ತು ಅಗಾಧವಾದದ್ದು. ನೆಲ, ಜಲ, ಭಾಷೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಮೂಡಿರುವ ಅವರ ಸಾಹಿತ್ಯ ಗಟ್ಟಿನದಿಂದ ಕೂಡಿದೆ ಕುವೆಂಪು ಜನ್ಮದಿನಾಚರಣೆಯನ್ನು ಶಾಲೆ- ಕಾಲೇಜುಗಳಲ್ಲದೆ ಸಂಘ ಸಂಸ್ಥೆಗಳೂ ನಡೆಸಬೇಕು ಎಂದರು.
ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಉಪನ್ಯಾಸಕಿ ಆರ್. ರೋಹಿಣಿ ಮಾತನಾಡಿ, ಸಾಮಾಜಿಕ ಸುಧಾರಣೆ, ಭಾಷೆ ಬೆಳವಣಿಗೆ, ಅಧ್ಯಾತ್ಮ, ವೈಚಾರಿಕತೆ, ಧಾರ್ಮಿಕತೆ ಬೆಸೆದ ಸಾಹಿತ್ಯ ಕುವೆಂಪು ಅವರದ್ದು ಎಂದರು. ರಾಮಾಯಣ ದರ್ಶನಂ ಕೃತಿಯನ್ನು ವಿದ್ಯಾರ್ಥಿಗಳಿ ಅಭ್ಯಾಸ ಮಾಡಬೇಕು ಎಂದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಚಿ.ಮಾ.ಸುಧಾಕರ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ಕ.ಸಾ.ಪ ಅಧ್ಯಕ್ಷ ನಾರಾಯಣಸ್ವಾಮಿ, ಶಿಕ್ಷಕ ಟಿ.ಕೆ.ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಕುವೆಂಪು ರಚಿತ ಗೀತೆಗಳ ಗಾಯನ ನಡೆಯಿತು.