ಕುಷ್ಟಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷವೊಂದು ಮತದಾರರನ್ನು ಒಲಿಸಿಕೊಳ್ಳಲು ಉಚಿತವಾಗಿ ಕೊಳವೆ ಬಾವಿ ತೋಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ.
ಮಾಹಿತಿ ಪಡೆದು ದಾಳಿ ನಡೆಸಿದ ಅಧಿಕಾರಿಗಳು ಸಂಬಂಧಿಸಿದ ಕೊಳವೆ ಬಾವಿ ಕೊರೆಯುವ ಲಾರಿಯನ್ನೇ ಜಪ್ತಿ ಮಾಡಿದ ಘಟನೆ ಶನಿವಾರ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ನಡೆದಿದೆ.
`ರಾಜಕೀಯ ಪಕ್ಷವೊಂದರ ನಿಯೋಜಿತ ಅಭ್ಯರ್ಥಿಯೊಬ್ಬರು ಮತದಾರರಿಗೆ ಆಮಿಷ ಒಡ್ಡಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ' ಎಂದು ಚುನಾವಣಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದರು.
ಅದನ್ನು ಅನುಸರಿಸಿ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿ ಟಿ.ದಾದನೂರು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಆದರೆ ಕೊಳವೆ ಬಾವಿ ಕೊರೆಯುವ ವಾಹನದವರು ಅಥವಾ ಜನರು ಸಮರ್ಪಕ ಮಾಹಿತಿ ನೀಡಲಿಲ್ಲ.