ಸಕಲೇಶಪುರ: ತಾಲ್ಲೂಕಿನ ಬಿಸಿಲೆ ರಕ್ಷಿತ ಅರಣ್ಯ, ಕೊಡಗಿನ ಪುಷ್ಪಗಿರಿ ರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ಪಡೆ ಯೋಧರು ಕಾಡಿನಲ್ಲಿ ತಲೆಮರೆಸಿಕೊಂಡಿರುವ ನಕ್ಸಲರಿಗಾಗಿ ಶುಕ್ರವಾರವೂ ಕೂಂಬಿಂಗ್ ಮುಂದುವರೆದಿದೆ.
ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿಯೇ ಮುಕ್ಕಾಂ ಹೂಡಿದ್ದ ನಕ್ಸಲ್ ನಿಗ್ರಹ ಪಡೆಯ ಐಜಿಪಿ ಅಲೋಕ್ಕುಮಾರ್ ಶುಕ್ರವಾರ ಬೆಂಗಳೂರಿಗೆ ತೆರಳಿದರು. ನಿಗ್ರಹ ಪಡೆಯ ಎಸ್ಪಿ ವೇದಮೂರ್ತಿ, ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ನೇತೃತ್ವದಲ್ಲಿ 6 ಪ್ರತ್ಯೇಕ ತಂಡಗಳು ಬಿಸಿಲೆ ರಕ್ಷಿತ ಅರಣ್ಯದ ದಕ್ಷಿಣ ಕನ್ನಡ
ಭಾಗದಿಂದ, ಕೊಡಗಿನ ಪುಷ್ಪಗಿರಿ ರಕ್ಷಿತ ಅರಣ್ಯ ಭಾಗದಿಂದ ಭೀಮನಕಲ್ಲು, ಗೋರುಬೆಟ್ಟ, ಅಡ್ಡಹೊಳೆ, ಬ್ಯೂಟಿ ಸ್ಪಾಟ್, ಜಗಾಟ, ಗೋರ್ಮನೆ, ಮಾವಿನೂರು, ಹಡ್ಲುಗದ್ದೆ ಮುಂತಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಮಳೆ ಅಡ್ಡಿ: ಶುಕ್ರವಾರ ಸಂಜೆ 6 ಗಂಟೆ ನಂತರ ತಾಲ್ಲೂಕಿನ ಬಹುತೇಕ ಕಡೆ ಮಳೆಯಾಗಿದ್ದು, ಬಿಸಿಲೆ ರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿಯೂ ಮಳೆಯಾಗುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿ ಆಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.