ಚೆನ್ನೈ (ಪಿಟಿಐ): ಕೂಡುಂಕುಳಂ ಪರಮಾಣು ವಿದ್ಯುತ್ ಯೋಜನೆ (ಕೆಎನ್ಪಿಪಿ) ಮತ್ತು ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದಗಳನ್ನು ಬಗೆಹರಿಸುವಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ ನಿರಾಸಕ್ತಿ ಹೊಂದಿವೆ ಎಂದು ಡಿಎಂಕೆ ಶುಕ್ರವಾರ ಕಿಡಿಕಾರಿದೆ.
2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಈ ಆಕ್ರೋಶ ವ್ಯಕ್ತವಾಯಿತು.
ಕೂಡುಂಕುಳಂ ಯೋಜನೆ ಬಗ್ಗೆ ಸ್ಥಳೀಯರ ಆತಂಕ ದೂರ ಮಾಡಲು ಕೇಂದ್ರ ತಜ್ಞರ ಸಮಿತಿಯೊಂದನ್ನು ರಚಿಸಿತು. ಆದರೆ ಈ ಸಮಿತಿಯಿಂದ ಯಾವುದೇ ಪ್ರಯೋಜನ ಆಗಿಲ್ಲ. ಇದೇ ವೇಳೆಗೆ ರಾಜ್ಯ ಸರ್ಕಾರ ಕೂಡ ಈ ವಿಚಾರದಲ್ಲಿ ನಿಷ್ಕ್ರಿಯವಾಗಿದೆ ಎಂದು ಸಭೆ ದೂರಿತು.
ಕೇರಳ ಮತ್ತು ತಮಿಳುನಾಡು ರಾಜ್ಯಗಳ ನಡುವೆ ವೈಮನಸ್ಯಕ್ಕೆ ಕಾರಣವಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದವನ್ನು ಬಗೆಹರಿಸುವಲ್ಲಿ ಕೇಂದ್ರ ವಿಳಂಬ ಮಾಡುತ್ತಿದೆ. ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾ ಪಡೆ ದಾಳಿ ನಡೆಸುತ್ತಿದ್ದರೂ ಕೇಂದ್ರ ತಪ್ಪಗಿದೆ ಎಂದು ಸಭೆ ಆಕ್ಷೇಪಿಸಿತು.
ಮೀನುಗಾರರ ರಕ್ಷಣೆಗೆ ಧಾವಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾದೀತು ಎಂದೂ ಯುಪಿಎ ಅಂಗ ಪಕ್ಷವಾದ ಡಿಎಂಕೆ ಎಚ್ಚರಿಕೆ ನೀಡಿದೆ.