ನವದೆಹಲಿ (ಪಿಟಿಐ): ಎಲ್ಲ ರೀತಿಯ ಸುರಕ್ಷಾ ಮಾನದಂಡಗಳನ್ನು ಪೂರೈಸುವವರೆಗೆ ಕೂಡುಂಕುಳಂ ಅಣು ಸ್ಥಾವರ ಕಾರ್ಯಾರಂಭಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಮೂರು ತಿಂಗಳ ಅವಧಿಯಲ್ಲಿ ನಡೆದ ಸರಣಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ದೀಪಕ್ ಮಿಶ್ರಾ ತೀರ್ಪನ್ನು ಕಾಯ್ದಿರಿಸಿದ್ದಾರೆ. ವಿವಾದಿತ ಅಣು ಸ್ಥಾವರದಿಂದ ಪರಿಸರದ ಮೇಲೆ ಆಗುವ ಪರಿಣಾಮ, ಅಣು ತ್ಯಾಜ್ಯ ವಿಲೇವಾರಿ, ಜನರ ಸುರಕ್ಷತೆಗೆ ಕೈಗೊಂಡಿರುವ ಕ್ರಮವನ್ನು ಪ್ರಶ್ನಿಸಿ ಅಣು ಸ್ಥಾವರ ವಿರೋಧಿ ಕಾರ್ಯಕರ್ತರು ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಸುರಕ್ಷತೆಗೆ ಸಂಬಂಧಿಸಿದಂತೆ ಮಾಡಲಾಗಿರುವ ಆರೋಪಗಳನ್ನು ಕೇಂದ್ರ, ತಮಿಳುನಾಡು ಸರ್ಕಾರ, ಭಾರತೀಯ ಅಣುಶಕ್ತಿ ನಿಗಮ ತಳ್ಳಿ ಹಾಕಿವೆ. ಅಣು ಸ್ಥಾವರ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಯಾವುದೇ ರೀತಿಯ ನೈಸರ್ಗಿಕ ವಿಕೋಪ ಮತ್ತು ಭಯೋತ್ಪಾದಕ ದಾಳಿ ಎದುರಿಸಲು ಸಿದ್ಧ ಎಂದು ಸುಪ್ರೀಂಕೋರ್ಟ್ಗೆ ತಿಳಿಸಿವೆ.