ಚೆನ್ನೈ, (ಪಿಟಿಐ): ಭಾರತ ಮತ್ತು ರಷ್ಯಾ ಜಂಟಿಯಾಗಿ ಕೈಗೊಂಡಿರುವ ಕೂಡುಂಕುಳಂ ಪರಮಾಣು ವಿದ್ಯುತ್ ಘಟಕದಲ್ಲಿ 150 ರಷ್ಯಾ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದು, ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆಯಿಂದ ಅವರಲ್ಲಿ ಯಾರೂ ಕೆಲಸ ತೊರೆದಿಲ್ಲ ಎಂದು ಯೋಜನೆಯ ಉನ್ನತ ಅಧಿಕಾರಿಗಳು ಸ್ಪಷ್ಟನೆ ನಿಡಿದ್ದಾರೆ.
`ಯಾವೊಬ್ಬ ರಷ್ಯಾ ವಿಜ್ಞಾನಿಗಳು ಮರಳಿ ಹೋಗಿಲ್ಲ. ಅವರು ನಮ್ಮಂದಿಗೆ ಕೆಲಸ ಮಾಡುತ್ತಿದ್ದಾರೆ. ಘಟಕದಲ್ಲಿ 150 ರಷ್ಯಾ ವಿಜ್ಞಾನಿಗಳಿದ್ದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೂಡುಂಕುಳಂ ಅಣುಶಕ್ತಿ ಘಟಕ (ಕೆಎನ್ಪಿಪಿ) ದ ಯೋಜನಾ ನಿರ್ದೇಶಕ ಎಂ. ಕಾಶಿನಾಥ ಬಾಲಾಜಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
`ಇಲ್ಲಿ ಕೆಲಸ ಮಾಡುತ್ತಿರುವ ರಷ್ಯಾ ವಿಜ್ಞಾನಿಗಳಲ್ಲಿ ಕೆಲವರು ಒಬ್ಬರೇ ವಾಸಿಸುತ್ತಿದ್ದರೆ, ಕೆಲವರು ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇತರರು ದೀರ್ಘ ಮತ್ತು ಅಲ್ಪಾವಧಿ ಕಾರ್ಯಭಾರದ ಮೇಲೆ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.
ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ರಷ್ಯಾ ವಿಜ್ಞಾನಿಗಳು ಯೋಜನೆ ಬಿಟ್ಟು ಮರಳಿದ್ದಾರೆ ಎಂಬ ಮಾಧ್ಯಮ ವರದಿ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
ಯೋಜನೆಯ ಮೊದಲ ಘಟಕದ ಶೇ 99 ಕೆಲಸ ಮುಗಿದಿದ್ದು ಈ ವರ್ಷದ ಡಿಸೆಂಬರ್ನಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಎರಡನೇ ಘಟಕದ ಶೇ 93 ಕಾರ್ಯ ಪೂರ್ಣಗೊಂಡಿದ್ದು ಮುಂದಿನ ಆಗಸ್ಟ್ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದರು.