ವಿಜಾಪುರ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ನೀಡಿದ್ದ ಭರಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ಅತಿ ಹೆಚ್ಚಿನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು. ಭರಟಗಿ ತಾಂಡಾ ನಂ-3ರಲ್ಲಿ ಹಮ್ಮಿಕೊಂಡಿದ್ದ ‘ಭರಟಗಿ ತಾಂಡಾ 3-ಹಂಚನಾಳ-ಇಂಡಿ’ ಕೂಡು ರಸ್ತೆಯ 83.6ಲಕ್ಷ ರೂಪಾಯಿಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಭರಟಗಿ, ಹಂಚನಾಳ ಗ್ರಾಮ ಮತ್ತು ತಾಂಡಾಗಳ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿದೆ. ಬರುವ ಶೈಕ್ಷಣಿಕ ವರ್ಷದಿಂದ ಪ್ರೌಢ ಶಾಲೆ ಆರಂಭಿಸುತ್ತಿದೆ. ಹಂಚಿನಾಳ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದರು. ಎ.ಪಿ.ಎಂ.ಸಿ. ನಿರ್ದೇಶಕ ಸಿದ್ದಣ್ಣ ಸಕ್ರಿ ಮಾತನಾಡಿ, ಎಂ.ಬಿ. ಪಾಟೀಲರ ನೇತೃತ್ವದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮಾದರಿಯಾಗಿವೆ ಎಂದರು.
ಜಿ.ಪಂ. ಸದಸ್ಯ ದೇವಾನಂದ ಚವ್ಹಾಣ, ಗಣ್ಯರಾದ ಸಜ್ಜನ, ಸುರೇಶ ರಾಠೋಡ, ನೀಲು ನಾಯಕ, ಪದ್ದು ಚವ್ಹಾಣ, ಬಾಬರಿ ಭರಟಗಿ, ಯೋಜನಾ ವಿಭಾಗ ಆರ್.ಜಿ. ಕಟ್ಟಿಮನಿ, ಎನ್.ಜಿ. ಮಂಗಲಗಿ, ಬಿ.ಸಿ. ಚಿಕ್ಕಲಕಿ, ಜಿ.ವಿ. ಕಿರಸೂರ, ಎಸ್.ಎಂ. ಹಿರೊಳ್ಳಿ, ಬೀಳಗಿ ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು.