ಕೂಡ್ಲಿಗಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ತಾಲ್ಲೂಕಿನಲ್ಲಿ ಅಕ್ಟೋಬರ್ 7ರಿಂದ ಮೂರು ದಿನಗಳವರೆಗೆ ಕಾನೂನು ಸಾಕ್ಷರತಾ ರಥ ಸಂಚರಿಸಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್.ಕುಲಕರ್ಣಿ ತಿಳಿಸಿದರು.
ಅವರು ಈಚೆಗೆ ನ್ಯಾಯಾಲಯದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಕಾನೂನು ಸಾಕ್ಷರಾತ ರಥದ ಮೂಲಕ ತಾಲ್ಲೂಕಿನ ಗ್ರಾಮಗಳಲ್ಲಿ ಕಾನೂನು ತಿಳಿವಳಿಕೆ, ಪ್ರಚಾರ, ಸಂಚಾರಿ ನ್ಯಾಯಾಲಯ, ಲೋಕ ಅದಾಲತ್, ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾನೂನು ರಥ ಸಂಚರಿಸುವ ಗ್ರಾಮಗಳಲ್ಲಿ ನಡೆಯುವ ಸಭೆಗಳನ್ನು ಗ್ರಾ.ಪಂ., ಶಿಕ್ಷಣ ಇಲಾಖೆ, ಗ್ರಾಮ ಲೆಕ್ಕಿಗರು, ಗೆಸ್ಕಾಂ ಇಲಾಖೆ ನಿರ್ವಹಿಸಲು ಸೂಚಿಸಲಾಯಿತು.
ಅ.7ರಂದು ಬೆಳಿಗ್ಗೆ ತಾಲ್ಲೂಕು ಕಚೇರಿಯ ಆವರಣದಲ್ಲಿ ಕಾನೂನು ಸಾಕ್ಷರತಾ ರಥದ ಉದ್ಘಾಟನೆ, ಮಧ್ಯಾಹ್ನ ಗುಡೇಕೋಟೆ, ಸಂಜೆ ಚಂದ್ರಶೇಖರಪುರ ಗ್ರಾಮದಲ್ಲಿ ಸಂಚಾರ. ಅ.8ರಂದು ಎಂ.ಬಿ. ಅಯ್ಯನಹಳ್ಳಿ, ಚಿಕ್ಕಜೋಗಿಹಳ್ಳಿ ತಾಂಡ, ಹುರುಳಿಹಾಳ್. ಅ. 9ರಂದು ಕೆ.ಅಯ್ಯನಹಳ್ಳಿ, ದೂಪದಹಳ್ಳಿ, ಕೊಟ್ಟೂರುಗಳಲ್ಲಿ ಸಂಚರಿಸುವುದು ಎಂದು ತಿಳಿಸಿದರು.
ಸಭೆಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಪರದೇಶಿ, ತಹಸೀಲ್ದಾರ್ ವೀರಮಲ್ಲಪ್ಪ ಪೂಜಾರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಣ್ಣವೀರಣ್ಣ, ಪ.ಪಂ. ಮುಖ್ಯಾಧಿಕಾರಿ ಪ್ರೇಮಚಾರ್ಲ್ಸ್, ಪಿಎಸ್ಐ ಎರಿಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷ ಎಚ್.ಜಿ. ಗುರುರಾಜ ರಾವ್, ಕಾರ್ಯದರ್ಶಿ ಎ.ಶಿವರಾಜ್, ಜಂಟಿ ಕಾರ್ಯದರ್ಶಿ ಎಂ. ನಾಗರಾಜ್, ಕೆ.ಎಚ್.ಎಂ. ಶೈಲಜಾ, ಕೆ. ಸಿದ್ದಪ್ಪ, ಎಚ್.ಬಿ. ವೀರಭದ್ರಗೌಡ, ಹೊನ್ನೂ ರಪ್ಪ, ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಕಲಾವತಿ, ಬಿ. ಮಂಜುಳ, ಸಾವಿತ್ರಿಬಾಯಿ, ವಿರೂಪಾಕ್ಷಿ, ಸಿದ್ದಲಿಂಗಪ್ಪ, ನಾಗರಾಜ್ ಇತರರಿದ್ದರು.