ಕೊಪ್ಪಳ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಿದ ಕಾಮಗಾರಿಯ ಕೂಲಿ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಓಜನಹಳ್ಳಿ ಗ್ರಾಮದ ಕೂಲಿಕಾರರು ಬುಧವಾರ ಇಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.
ಕಾರ್ಮಿಕ ಮುಖಂಡ ಕೆ.ಬಿ.ಗೋನಾಳ ಮಾತನಾಡಿ, 2011-12ನೇ ಸಾಲಿನಲ್ಲಿ ಅರಣ್ಯ ಇಲಾಖೆಯಡಿ ನಿರ್ವಹಿಸಿದ ಕಾಮಗಾರಿಗೆ ಸಂಬಂಧಿಸಿದಂತೆ 46 ಜನ ಕೂಲಿ ಕಾರ್ಮಿಕರಿಗೆ ಈವರೆಗೆ ಕೂಲಿ ಹಣವನ್ನು ನೀಡದ ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು.
ಕೂಲಿಕಾರರಿಗೆ ಒಟ್ಟು 1.48 ಲಕ್ಷ ರೂ ಹಣವನ್ನು ಪಾವತಿಸಬೇಕಾಗಿದೆ. ಈ ಹಣವನ್ನು ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಗೆ ಮೂಲಕ ಸಂದಾಯ ಮಾಡಲಾಗಿದೆ ಎಂಬುದಾಗಿ ಗ್ರಾಮ ಪಂಚಾಯಿತಿ ಪಿಡಿಒ ನೀಡಿರುವ ದಾಖಲೆಗಳು ಹೇಳುತ್ತವೆ. ಆದರೆ, ಇದುವರೆಗೂ ಹಣ ಜಮೆಯಾಗಿಲ್ಲ ಎಂದು ದೂರಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಮೂರು ದಿನಗಳ ಒಳಗಾಗಿ ಕೂಲಿ ಹಣವನ್ನು ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಕೂಲಿಕಾರರು ಪ್ರತಿಭಟನೆ ಹಿಂದಕ್ಕೆ ಪಡೆದರು. ಬಸವರಾಜ ನರೇಗಲ್, ರೇಣುಕಮ್ಮ ಬಂಡಿ, ನೀಲಮ್ಮ ಕೆರೆಹಳ್ಳಿ, ಬಾಲಪ್ಪ ಶಾನುಭೋಗ ನೇತೃತ್ವ ವಹಿಸಿದ್ದರು.