ಕುಣಿಗಲ್: ಅನ್ನಭಾಗ್ಯ ಯೋಜನೆಯ ಜಾರಿಗೆ ಶ್ರಮಿಸುತ್ತಿರುವ ಹಮಾಲಿ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನ ಮುಂದೆ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯಡಿ ಒಟ್ಟುಗೂಡಿದ ತಾಲ್ಲೂಕು ಅನ್ನಭಾಗ್ಯ ಯೋಜನೆಯ ಹಮಾಲರು, ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ವೆಂಕಟೇಶ್, ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಗಟು ಅಹಾರ ಗೋದಾಮುಗಳಲ್ಲಿ ಅಹಾರ ಧಾನ್ಯಗಳ ಸಾಗಣೆ, ಇಳಿಸುವ, ತುಂಬುವ ಕೆಲಸ ಮಾಡುವ ಹಮಾಲರಿಗೆ, ಕ್ವಿಂಟಲ್ಗೆ ಕೇವಲ ರೂ. 6 ಕೂಲಿ ಸಿಗುತ್ತಿದೆ. ಇಎಸ್ಐ, ಪಿಎಫ್ ಸೇರಿದಂತೆ ಯಾವುದೇ ಸವಲತ್ತು ಸಿಗುತ್ತಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರವೆ ಕ್ವಿಂಟಲ್ಗೆ ರೂ. 18 ನೀಡುವಂತೆ ಶಿಫಾರಸ್ಸು ಮಾಡಿದ್ದರೂ, ಅದನ್ನು ಜಾರಿಗೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು. ಪ್ರಮುಖರಾದ ನಟರಾಜ್, ಮೆಹಬೂಬ್, ರಮೇಶ, ಕೃಷ್ಣಪ್ಪ, ರಾಜಣ್ಣ ಇತರರು ಉಪಸ್ಥಿತರಿದ್ದರು.