ಕಂಪ್ಲಿ: ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರು ಹಣ ನೀಡುವಂತೆ ಆಗ್ರಹಿಸಿ ಇಲ್ಲಿಗೆ ಸಮೀಪದ ದೇವಲಾಪುರ ಗ್ರಾ.ಪಂ. ಗೇಟ್ಗೆ ಗುರುವಾರ ಬೀಗ ಹಾಕಿ ಧರಣಿ ನಡೆಸಿದರು.
ಧರಣಿ ನಿರತ ಮಹಿಳಾ ಕಾರ್ಮಿಕರು ಮಾತನಾಡಿ, ಖಾತ್ರಿ ಯೋಜನೆಯಡಿ ಸುಮಾರು 87 ಜನ ಕೆಲಸ ನಿರ್ವಹಿಸಿದ್ದೀವೆ. ಆದರೆ, ಗ್ರಾ.ಪಂ. ಅಧಿಕಾರಿಗಳು ಕೂಲಿ ಪಾವತಿಸದೆ ಸತಾಯಿಸುತ್ತಿದೆ ಎಂದು ದೂರಿದರು. ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಸದಿರುವುದರಿಂದ ದೈನಂದಿನ ಜೀವನ ನಿರ್ವಹಣೆ ದುಸ್ತರವಾಗಿದೆ ಎಂದು ಹೇಳಿದರು.
ಇದೀಗ ಆಯುಧ ಪೂಜೆ, ದಸರಾ ಹಬ್ಬ ಸಮೀಪಿಸುತ್ತಿದ್ದು, ಖರ್ಚಿಗೆ ಹಣವಿಲ್ಲವಾಗಿದೆ ಎಂದು ಗೋಳು ತೋಡಿಕೊಂಡರು. ಹಣ ಪಾವತಿಸುವಂತೆ ಕಳೆದ ಎರಡು ದಿನಗಳಿಂದ ಗ್ರಾ.ಪಂ. ಅಲೆಯುತ್ತಿದ್ದರೂ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು. ಮಹಿಳಾ ಕಾರ್ಮಿಕರಾದ ಒಗ್ಗರ ಗಂಗಮ್ಮ, ಸಿದ್ದಮ್ಮ, ಕಾರಿಗನೂರು ನೀಲಮ್ಮ, ಜಿ. ಡೀಲಮ್ಮ, ತಳವಾರ ನಾಗಮ್ಮ, ಸಂಕಟಿ ರುದ್ರಸಮ್ಮ, ಎಚ್. ಗುಂಡಮ್ಮ, ಎಚ್. ಬಸಮ್ಮ, ಎಚ್. ಅಂಜೀನಪ್ಪ, ಎಚ್. ರುದ್ರಪ್ಪ ಇತರರು ಧರಣಿಯಲ್ಲಿ ಭಾಗವಹಿಸಿದ್ದರು.
ಈ ಕುರಿತು `ಪ್ರಜಾವಾಣಿ~ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಲಸ್ವಾಮಿ ದೇಶಪ್ಪ ಅವರನ್ನು ಸಂಪರ್ಕಿಸಿದಾಗ ದೇವಲಾಪುರ ಕೂಲಿ ಕಾರ್ಮಿಕರಿಗೆ ಹಣ ಪಾವತಿಸುವ ಸಂಬಂಧ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಶೀಘ್ರದಲ್ಲಿ ರೂ 3 ಲಕ್ಷ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಹಣ ಬಿಡುಗಡೆಯಾಗುತ್ತಿದ್ದಂತೆ ಎಲ್ಲಾ ಕೂಲಿ ಕಾರ್ಮಿಕರ ಖಾತೆಗೆ ಹಣ ಸಂದಾಯವಾಗಲಿದೆ. ಅಲ್ಲಿಯವರೆಗೆ ಸಹಕರಿಸುವಂತೆ ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವಿವರಿಸಿದರು. ಸುಗ್ಗೇನಹಳ್ಳಿ ಪಿಡಿಒ ಜಿ. ಆಂಜನೇಯಲು, ಗ್ರಾ.ಪಂ ಸದಸ್ಯ ಶಿವಕುಮಾರ ಹಾಜರಿದ್ದರು.