ಜಾಗತಿಕ ತಾಪಮಾನ ತಡೆಗೆ ವಿಭಿನ್ನ ಚಿಂತನೆ
ಹೈದರಾಬಾದ್ (ಐಎಎನ್ಎಸ್): ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಸಲುವಾಗಿ ಬಾಹ್ಯಾಕಾಶದ್ಲ್ಲಲೇ ಕೃತಕ ಸೌರ ರಕ್ಷಾಕವಚ ಅಳವಡಿಸಿದರೆ ಹೇಗೆ?
ಹೌದು. ಈ ಕುರಿತು ಇರಬಹುದಾದ ಸಾಧ್ಯತೆಗಳ ಕುರಿತು ಹೈದರಾಬಾದ್ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ `11ನೇ ಜೀವ ವೈವಿಧ್ಯ ಮಹಾ ಸಮ್ಮೇಳನ~ (ಸಿಬಿಡಿ)ದಲ್ಲಿ ಭಾಗವಹಿ ಸಿರುವ ಸುಮಾರು 170 ರಾಷ್ಟ್ರಗಳ ಪರಿಸರ ವಿಜ್ಞಾನಿಗಳು ಮತ್ತು ತಜ್ಞರು ಚಿಂತನೆ ನಡೆಸುತ್ತಿದ್ದಾರೆ.
ಬಾಹ್ಯಕಾಶದಲ್ಲಿ ಈ ಸೌರ ರಕ್ಷಾಕವಚ ಅವಳವಡಿಸಿ, ಅದರ ಮೇಲ್ಮೈಗೆ ಸಲ್ಫೇಟ್ ಲೇಪಿಸಿ, ಆ ಮೂಲಕ ಭೂಮಿಗೆ ತಲುಪುವ ಸೂರ್ಯನ ಕಿರಣಗಳ ತೀಕ್ಷ್ಣತೆಯನ್ನು ಕಡಿಮೆಗೊಳಿಸುವ ಬಿಸಿಲು ಪ್ರತಿಫಲನ (ಎಸ್ಆರ್ಎಂ- ಸನ್ಲೈಟ್ ರಿಫ್ಲೆಕ್ಷನ್ ಮೆಥಡ್ಸ್) ಮತ್ತು ಇಂಗಾಲದ ಡೈ ಆಕ್ಸೈಡ್ ಹೊರತೆಗೆಯುವಿಕೆ (ಸಿಡಿಆರ್- ಕಾರ್ಬನ್ ಡೈ ಆಕ್ಸೈಡ್ ರಿಮೂವಲ್) ಎಂಬ ಜಿಯೋ ಎಂಜಿನಿಯರಿಂಗ್ ವಿಧಾನಗಳ ಕಡೆಗೆ ಎಲ್ಲರ ಚಿತ್ತ ಹರಿದಿದೆ.
ಆದರೆ, ಜಾಗತಿಕ ತಾಪಮಾನ ಕಡಿಮೆ ಮಾಡುವ ಈ ನೂತನ ವಿಧಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಜ್ಞರು, `ಎಸ್ಆರ್ಎಂ ಮತ್ತು ಸಿಡಿಆರ್ ವಿಧಾನಗಳು ಓಝೋನ್ ಪದರ, ಬೆಳಕಿನ ಶಕ್ತಿ ಮತ್ತು ಗುಣಮಟ್ಟ ಹಾಗೂ ಸಸ್ಯಗಳ ಆಹಾರ ಉತ್ಪಾದನೆ ಸೇರಿದಂತೆ ಭೂಮಿಯ ಜೀವ ವೈವಿಧ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ~ ಎಂದು ಎಚ್ಚರಿಕೆ ನೀಡಿದ್ದಾರೆ.