ಮೂಡುಬಿದಿರೆ: `ಕನ್ನಡದ ಮೌಲ್ಯಯುತ ಸಾಹಿತ್ಯ ಕೃತಿಗಳು ಅನ್ಯಭಾಷೆಗಳಿಗೆ ಸಾಕಷ್ಟು ಭಾಷಾಂತರಗೊಳ್ಳದ ಕಾರಣ ಇದರ ಶ್ರೀಮಂತಿಕೆ ಅನ್ಯಭಾಷೆಗೆ ಪರಿಚಯವಾಗಿಲ್ಲ~ ಎಂದು ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ಇಲ್ಲಿನ ರಮಾರಾಣಿ ಶೋಧ ಸಂಸ್ಥಾನದಲ್ಲಿ ಶನಿವಾರ ನಡೆದ 2010ನೇ ಸಾಲಿನ ವರ್ಧಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. `ಕನ್ನಡದ ಕೃತಿಗಳಿಗೆ ದೇಶ, ವಿದೇಶದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕಾದರೆ ಅವು ಕಾಲಕಾಲಕ್ಕೆ ಹಿಂದಿ, ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳಿಗೆ ಭಾಷಾಂತರಗೊಳ್ಳಬೇಕು. ಆಗ ಮಾತ್ರ ನಮ್ಮ ಭಾಷೆಯ ಶ್ರೀಮಂತಿಕೆ ಹೆಚ್ಚುತ್ತದೆ~ ಎಂದರು.
ಜೈನ ಮಠದ ಸ್ವಸ್ತಿ ಭಟ್ಟಾರಕ ಚಾರುಕೀರ್ತಿ ಶ್ರೀಗಳು ವರ್ಧಮಾನ ಸಾಹಿತ್ಯ ಪೀಠದ ವತಿಯಿಂದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ `ಅಪರಂಪಾರ~ ಕೃತಿಗೆ ವರ್ಧಮಾನ ಪ್ರಶಸ್ತಿ ಹಾಗೂ ಬೆಳಗೋಡು ರಮೇಶ್ ಭಟ್ ಅವರ `ಮನುಷ್ಯರನ್ನು ನಂಬಬಹುದು~ ಕೃತಿಗೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸಾಹಿತ್ಯ ಮತ್ತು ಧರ್ಮ ಜತೆಯಾಗಿ ಸಾಗಿದಾಗ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಪೀಠದ ಅಧ್ಯಕ್ಷ ಸಿ.ಕೆ. ಪಡಿವಾಳ್, ಉಪಾಧ್ಯಕ್ಷ ಯಶೋಧರ ಕರ್ಕೇರಾ, ಪುಂಡಿಕ್ಯಾ ಗಣಪಯ್ಯ ಭಟ್, ಸಂಪತ್ ಸಾಮ್ರಾಜ್ಯ, ವಿಠಲ ಬೇಲಾಡಿ, ಪ್ರಧಾನ ನಿರ್ದೇಶಕ ಡಾ. ನಾ. ಮೊಗಸಾಲೆ, ಹೇಮಾಪಟ್ಟಣ ಶೇಟ್ಟಿ ಇದ್ದರು.