ರಾಜ್ಯ ಸರ್ಕಾರ ಈ ವರ್ಷ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವುದಾಗಿ ಹೇಳಿರುವುದು ಖುಷಿ ತಂದಿದೆ. ಸರ್ಕಾರವು ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳಿಗೆ ಕಳೆದ ಬಜೆಟ್ಗಿಂತ ಈ ವರ್ಷ ಅತಿ ಹೆಚ್ಚಿನ ಹಣವನ್ನು ಮೀಸಲಿಡುವುದಾಗಿ ಹೇಳಿದೆ.
ಹಾಗೆಯೇ ಕೃಷಿ ವಿಜ್ಞಾನ ಕೇಂದ್ರಗಳನ್ನು ಸಾವಯವ ಕೃಷಿ ವಿಜ್ಞಾನ ಕೇಂದ್ರಗಳನ್ನಾಗಿ ಮಾಡಲು ಹೊರಟಿರುವುದು ರೈತರ ಹಿತ ದೃಷ್ಟಿಯಿಂದ ಒಳ್ಳೆಯದು. ಕಳೆದ ಬಜೆಟ್ನಲ್ಲಿ ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿಯಿರುವ ಕೃಷಿ ಅಧಿಕಾರಿಗಳ ಹುದ್ದೆಗಳಿಗೆ ನೇಮಕ ಮಾಡದೇ ಹೊಸ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ.
ರೈತರಿಗೆ ಕೃಷಿ ಮತು ಕೃಷಿ ಸವಲತ್ತುಗಳ ಬಗ್ಗೆ ಮಾಹಿತಿಗಳನ್ನು ತಿಳಿಸುವಲ್ಲಿ ಈ ರೈತ ಸಂಪರ್ಕ ಕೇಂದ್ರಗಳು ಹೆಚ್ಚಿನ ಪಾತ್ರ ವಹಿಸುತ್ತವೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ರೈತ ಸಂಪರ್ಕ ಕೇಂದ್ರಗಳು ಕೃಷಿ ಅಧಿಕಾರಿಗಳಿಲ್ಲದೆ ಕೃಷಿ ಸಹಾಯಕರಿಂದಲೇ ಕೆಲಸವನ್ನು ನಿರ್ವಹಿಸುತ್ತಿವೆ. ಈ ಪರಿಸ್ಥಿತಿಯಿರುವುದರಿಂದ ರೈತರಿಗೆ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಮತ್ತು ಕೃಷಿಯ ಹೊಸ ತಾಂತ್ರಿಕತೆಗಳ ಬಗ್ಗೆ ಅರಿವು ಹೇಗೆ ತಾನೇ ಮೂಡುತ್ತದೆ.
ಹಾಗಾಗಿ ಬಜೆಟ್ ಹಣವು ಯಾವ ರೀತಿ ರೈತರಿಗೆ ಅನುಕೂಲವಾಗುತ್ತದೆ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಆದ್ದರಿಂದ ಖಾಲಿಯಿರುವ ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಅಧಿಕಾರಿಗಳ ಹುದ್ದೆಗಳ ನೇಮಕಾತಿ ಮಾಡುವತ್ತ ಸರ್ಕಾರ ಈ ಬಜೆಟ್ನಲ್ಲಿ ಗಮನಹರಿಸಿದರೇ ಒಳ್ಳೆಯದು.