ಯಮಕನಮರಡಿ: ಹೋಬಳಿಯಲ್ಲಿ ಮಿರಗಾ ಮಳೆಯ ಮೊದಲ ಹಂತದಲ್ಲೇ ಬಿತ್ತನೆ ಮಾಡುವ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿದೆ. ಕೆಲವು ಕೃಷಿಕರು ತಮ್ಮ ಹೊಲಗಳಲ್ಲಿ ನೇಗಿಲು ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ.
ಕಳೆದ ವಾರ ರೋಹಿಣಿ ಮಳೆಯು ಅಲ್ಪ ಸ್ವಲ್ಪ ಮಳೆಯಿಂದ ಶೇ. 30 ರಷ್ಟು ಬಿತ್ತನೆ ಕಾರ್ಯವನ್ನು ಕೃಷಿಕರು ನಡೆಸಿದ್ದರು. ಹೊಲ ಉಳುವುದು, ಕಳೇ (ಕಾಸಿಗೆ) ಆರಸುವುದು, ಸಾವಯುವ ಗೊಬ್ಬರ ಹಾಕುವ ಕಾರ್ಯ ಶೇಕಡಾ 60ರಷ್ಟು ಭೂಮಿಗಳಲ್ಲಿ ಮುಕ್ತಾಯಗೊಂಡಿದೆ.
ಹುಕ್ಕೇರಿ ತಾಲ್ಲೂಕಿನಾದ್ಯಂತ 70,500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಈಗಾಗಲೇ ವ್ಯಾಪಾರಸ್ಥರಲ್ಲಿ ಚರ್ಚೆಯೂ ಪ್ರಾರಂಭವಾಗಿದೆ. ಹುಕ್ಕೇರಿ ತಾಲ್ಲೂಕಿನಲ್ಲಿ ಹತ್ತಿ ಮತ್ತು ಸೊಯಾಬೀನ್ ಬೆಳೆ ಹೆಚ್ಚಾಗಲಿದ್ದು. ಇನ್ನುಳಿದ ಬೆಳೆಗಳಾದ ಜೋಳ, ಶೇಂಗಾ, ತಂಬಾಕು, ಗೋಧಿ ಗೋವಿನಜೋಳ, ಬಟಾಡೆ, ಉದ್ದು, ಸಜ್ಜೆ, ಹೆಸರು ಇತರೆ ಬೆಳೆಗಳನ್ನು ಕಡಿಮೆ ಪ್ರಮಾಣದಲ್ಲಿ ಬೆಳೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ.