ಬೆಂಗಳೂರು: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ನೀಡಿರುವ ಸರ್ಕಾರದ ಕ್ರಮವನ್ನು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್ಕೆಸಿಸಿಐ) ಸ್ವಾಗತಿಸಿದೆ.
ಕೃಷಿ ಸಂಬಂಧಿತ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಉತ್ತೇಜನ ಕೊಡುಗೆಗಳನ್ನು ಬಜೆಟ್ ಹೊಂದಿದೆ ಎಂದು ‘ಎಫ್ಕೆಸಿಸಿಐ’ ಅಧ್ಯಕ್ಷ ಎನ್.ಎಸ್ ಶ್ರೀನಿವಾಸಮೂರ್ತಿ ಹೇಳಿದ್ದಾರೆ.ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಆರ್ಕಷಿಸಲು ಸರ್ಕಾರ ರೂಪಿಸಿರುವ ‘ಕೃಷಿ ವಾಣಿಜ್ಯ ಸಮಾವೇಶ’ ಪರಿಕಲ್ಪನೆ ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗೆ ಅವಕಾಶ ಕಲ್ಪಿಸಲಿದೆ. ಕೃಷಿ ಆಧಾರಿತ ಕೈಗಾರಿಕಾ ವಲಯದ ಪ್ರಗತಿಗೂ ಇದು ಮಹತ್ವದ ಕೊಡುಗೆ ನೀಡಲಿದೆ ಎಂದಿದ್ದಾರೆ.
ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಕೃಷಿ ಸಲಕರಣೆಗಳನ್ನು ಖರೀದಿಸಲು ಶೇ 1ರ ಬಡ್ಡಿ ದರದಲ್ಲಿ ಕೃಷಿ ಸಾಲ ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಕಾಸಿಯಾ’ ಶ್ಲಾಘನೆ: ಸರ್ಕಾರ ಬಜೆಟ್ನಲ್ಲಿ ಕೃಷಿ ಕೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವುದರಿಂದ ತೋಟಗಾರಿಕೆ, ಪುಷ್ಪೋದ್ಯಮ, ರೇಷ್ಮೆ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಕ್ಷೇತ್ರ ಗಳೂ ಅಭಿವೃದ್ಧಿ ಸಾಧ್ಯವಾಗಲಿದೆ. ಜತೆಗೆ ಸಾವಯವ ಕೃಷಿ, ಜೈವಿಕ ಇಂಧನ ಅಭಿವೃದ್ಧಿ, ಹನಿ ನೀರಾವರಿ, ಕೆರೆಗಳ ಸಂರಕ್ಷಣೆ, ಶೈತ್ಯಾಗಾರಗಳ ನಿರ್ಮಾಣ, ವಿದ್ಯುತ್ ಸ್ವಾವಲಂಬನೆ ಇತ್ಯಾದಿ ಅಭಿವೃದ್ಧಿ ಯೋಜನೆಗಳು ರೈತರಿಗೆ ಅನುಕೂಲ ಕಲ್ಪಿಸಲಿವೆ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ) ಅಭಿಪ್ರಾಯಪಟ್ಟಿದೆ.
ಕಿರು ಮತ್ತು ಮಧ್ಯಮ ಕೈಗಾರಿಕೆಗಳು ಕೃಷಿ ಕ್ಷೇತ್ರವನ್ನು ನೇರವಾಗಿ ಅವಲಂಬಿಸಿವೆ. ಉದಾಹರಣೆಗೆ ಪುಷ್ಪೋದ್ಯಮದ ಮೇಲೆ ‘ವ್ಯಾಟ್’ ವಿನಾಯಿತಿ ಘೋಷಿಸಿರುವುದು ಉತ್ತಮ ಕ್ರಮ. ಜತೆಗೆ ಉತ್ತರ ಕರ್ನಾಟ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವುದೂ ಸ್ವಾಗತಾರ್ಹ ಎಂದು ಸಂಘದ ಅಧ್ಯಕ್ಷ ಎಸ್. ಎಸ್. ಬಿರಾದಾರ ಪ್ರತಿಕ್ರಿಯಿಸಿದ್ದಾರೆ.