ಬೆಳಗಾವಿ: ರಾಜ್ಯದಲ್ಲಿ ಸಾಧನೆಗೈದ ರೈತರಿಗೆ ಕೃಷಿ ಇಲಾಖೆಯಿಂದ 2011-12ನೇ ಸಾಲಿನ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಯನ್ನು ಇಲ್ಲಿನ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್ನಲ್ಲಿ ಸೋಮವಾರ ಪ್ರದಾನ ಮಾಡಲಾಯಿತು.
ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿ, ಬೆಳೆ ಪದ್ಧತಿ ಹಾಗೂ ಬೆಳೆ ವೈವಿಧ್ಯ ಕೃಷಿ ಪಂಡಿತ ಪ್ರಶಸ್ತಿ ವಿಭಾಗದಲ್ಲಿ ಇಬ್ಬರಿಗೆ ದ್ವಿತೀಯ (ರೂ. 50,000) ಹಾಗೂ 20 ರೈತರಿಗೆ ತೃತೀಯ (ರೂ. 25,000) ಬಹುಮಾನ ವಿತರಿಸಲಾಯಿತು. ಬತ್ತ, ಮುಸುಕಿನ ಜೋಳ, ರಾಗಿ, ಶೇಂಗಾ, ಗೋಧಿ ಹಾಗೂ ಕಬ್ಬು ಬೆಳೆ ಸ್ಪರ್ಧೆ ವಿಭಾಗದಲ್ಲಿ ಒಟ್ಟು 18 ರೈತರಿಗೆ ಬಹುಮಾನಗಳನ್ನು ನೀಡಲಾಯಿತು. ಪ್ರಶಸ್ತಿ ಫಲಕ, ರೇಷ್ಮೆ ಗೂಡಿನ ವಿಶೇಷ ಹಾರ, ನಗದು ಬಹುಮಾನಗಳನ್ನು ಸಂಸದ ಸುರೇಶ ಅಂಗಡಿ ಪ್ರದಾನ ಮಾಡಿದರು.