ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪಶಸ್ತಿ ಪ್ರದಾನ

Last Updated 18 ಫೆಬ್ರುವರಿ 2011, 18:05 IST
ಅಕ್ಷರ ಗಾತ್ರ

ಬೆಂಗಳೂರು:  ರೈತರ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ದೊರೆಯದಿರಲು ಉಗ್ರಾಣಗಳ ಕೊರತೆಯೇ ಮುಖ್ಯ ಕಾರಣ. ಈ ಸಮಸ್ಯೆ ನಿವಾರಣೆಗೆ ಕೃಷಿ ಬಜೆಟ್‌ನಲ್ಲಿ ಸೂಕ್ತ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಕೃಷಿ ಇಲಾಖೆಯು ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಮತ್ತು ‘ಕೃಷಿ ಪಂಡಿತ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ನಮ್ಮ ರೈತರು ಕೊಯ್ಲು ಮುಗಿಸಿದ ಬಳಿಕ ಬೆಳೆಯನ್ನು ಸಂಗ್ರಹಿಸಿಡಲು ಸಾಧ್ಯವಾಗುತ್ತಿಲ್ಲ. ಖಾಸಗಿ ಉಗ್ರಾಣಗಳಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ದಾಸ್ತಾನು ಇಟ್ಟರೆ ಬಾಡಿಗೆಯನ್ನೂ ನೀಡುವುದು ಅಸಾಧ್ಯ. ಇದರಿಂದಾಗಿ ಕೊಯ್ಲಿನ ಸ್ಥಳಗಳಿಂದಲೇ ಬೆಳೆ ದಲ್ಲಾಳಿಗಳ ಪಾಲಾಗುತ್ತಿದೆ. ಗೋದಾಮುಗಳ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದರು.

ಕೃಷಿ ಹೂಡಿಕೆದಾರ ಸಮಾವೇಶ: ಹಿಂದಿನ ವರ್ಷ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಈ ಬಾರಿ ಜೂನ್ ತಿಂಗಳಲ್ಲಿ ಕೃಷಿ ಹೂಡಿಕೆದಾರರ ಸಮಾವೇಶ ನಡೆಸಲು ನಿರ್ಧರಿಸಿದ್ದು, ಈಗಾಗಲೇ ಪೂರ್ವಸಿದ್ಧತೆ ಆರಂಭಿಸಲಾಗಿದೆ. ರಾಜ್ಯದ ಕೃಷಿ ವಲಯಕ್ಕೆ 50 ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ಗುರಿ ಇದೆ ಎಂದರು.

‘ಆತ್ಮಹತ್ಯೆ ಬೇಡ’: ‘ರಾಜ್ಯದಲ್ಲಿ ಇನ್ನೆಂದೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಬೇರೆಯವರ ಋಣದಲ್ಲಿ ಬದುಕುವವರು, ವಂಚನೆ ಮಾಡುವವರು ಬೇಕಾದರೆ ಆತ್ಮಹತ್ಯೆ ಮಾಡಿಕೊಳ್ಳಲಿ. ಎಲ್ಲರಿಗೂ ಕೈಚಾಚಿ ನೀಡುವ ಗುಣವುಳ್ಳ ರೈತನ ಮಕ್ಕಳು ಆತ್ಮಹತ್ಯೆಯ ಹಾದಿ ತುಳಿಯುವುದು ಬೇಡ’ ಎಂದು ಯಡಿಯೂರಪ್ಪ ಮನವಿ ಮಾಡಿದರು.

ರೈತ ಸಂಪರ್ಕ ಕೇಂದ್ರ: ರಾಜ್ಯದ ವಿವಿಧೆಡೆ ಸ್ಥಾಪಿಸಲು ಉದ್ದೇಶಿಸಿರುವ 100 ರೈತ ಸಂಪರ್ಕ ಕೇಂದ್ರ ಕಟ್ಟಡಗಳಿಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಾಂಕೇತಿಕ ಶಿಲಾನ್ಯಾಸ ನೆರವೇರಿಸಿದರು.

 25 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಕೃಷಿ ಸಚಿವ ಉಮೇಶ್ ಕತ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

 ಸಚಿವರಾದ ಎಸ್.ಎ.ರವೀಂದ್ರನಾಥ್, ಬಿ.ಎನ್.ಬಚ್ಚೇಗೌಡ, ರೇವುನಾಯಕ್ ಬೆಳಮಗಿ, ಜೆ.ಕೃಷ್ಣ ಪಾಲೇಮಾರ್, ಲಕ್ಷ್ಮಣ ಸವದಿ, ಸಂಸದ ಪಿ.ಸಿ.ಮೋಹನ್, ಅಭಿವೃದ್ಧಿ ಆಯುಕ್ತರಾದ ಮೀರಾ ಸಕ್ಸೇನಾ, ಕೃಷಿ ಆಯುಕ್ತ ಬಾಬುರಾವ್ ಮುಡಬಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 ಕೃಷಿ ಪ್ರಶಸ್ತಿ ವಿಜೇತರು
ಅತ್ಯಧಿಕ ಇಳುವರಿಗಾಗಿ ನಾಲ್ಕು ಬೆಳೆ ವಿಭಾಗಗಳಲ್ಲಿ ತಲಾ ಮೂರರಂತೆ ಒಟ್ಟು 12 ರೈತರಿಗೆ 2009-10ನೇ ಸಾಲಿನ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಥಮ ಬಹುಮಾನಕ್ಕೆ ರೂ 30,000, ದ್ವಿತೀಯ ಬಹುಮಾನಕ್ಕೆ ರೂ 20,000 ಮತ್ತು ತೃತೀಯ ಬಹುಮಾನಕ್ಕೆ ರೂ 10,000 ನಗದು ಪುರಸ್ಕಾರ ನೀಡಲಾಯಿತು.
ಪ್ರಶಸ್ತಿ ಪುರಸ್ಕೃತರ ವಿವರ

ಮುಸುಕಿನ ಜೋಳ (ನೀರಾವರಿ): ಎಂ.ಪಾರ್ವತಮ್ಮ, ಬೆಳಗುತ್ತಿ, ಹೊನ್ನಾಳಿ ತಾಲ್ಲೂಕು (ಪ್ರಥಮ), ಮಲ್ಲಿಕಾರ್ಜುನಪ್ಪ, ರಾಮೇಶ್ವರ, ಹೊನ್ನಾಳಿ ತಾ (ದ್ವಿತೀಯ) ಮತ್ತು ಈರಪ್ಪ ಬಂಡೆಪ್ಪ ಮೇಟಿ, ಅನಗವಾಡಿ, ಬೀಳಗಿ ತಾ (ತೃತೀಯ).

ಮುಂಗಾರಿ ಜೋಳ (ಮಳೆಯಾಶ್ರಿತ): ಡಿ.ಗೊಣೆಮ್ಮ, ಮಾದಾಪುರ, ಹರಪನಹಳ್ಳಿ ತಾ (ಪ್ರ), ನಾಗರಾಜೇಗೌಡ, ಮುಳ್ಳೂರು, ದೇವಗಳ್ಳಿ, ಮೈಸೂರು (ದ್ವಿ) ಮತ್ತು ಮಹದೇವಪ್ಪ, ಬರಡನಪುರ ಮೈಸೂರು ತಾ (ತೃ).

ಕಡಲೆ (ಮಳೆಯಾಶ್ರಿತ): ಗುರುದೇವಿ, ಮೈಲೇಶ್ವರ ಗ್ರಾಮ, ಮುದ್ದೇಬಿಹಾಳ ತಾ (ಪ್ರ), ರುಕ್ಮಿಣಿಬಾಯಿ, ಉದ್ಧವರಾವ ಲಿಂಬಾಪುರ, ಬಸವಕಲ್ಯಾಣ ತಾ (ದ್ವಿ) ಮತ್ತು ಸಿದ್ದಪ್ಪ ಬಸಪ್ಪ ಹುಲ್ಲೂರ, ಬಿದರಕುಂದಿ, ಮುದ್ದೇಬಿಹಾಳ ತಾ (ತೃ).

ಕಬ್ಬು (ನೀರಾವರಿ): ಅಪ್ಪಣ್ಣ ಬೀಮಗೌಡ ಅಸ್ಕಿ, ಹಾರುಗೇರಿ, ರಾಯಭಾಗ ತಾ (ಪ್ರ), ಮಲ್ಲಪ್ಪ ಈರಪ್ಪ ಮೇಟಿ, ಅನಗವಾಡಿ, ಬೀಳಗಿ ತಾ (ದ್ವಿ) ಮತ್ತು ಕೃಷ್ಣಪ್ಪ ಶಂಕ್ರಪ್ಪ ಮಾಚಕನೂರ, ಕೆಂಗಲಗುತ್ತಿ, ವಿಜಾಪುರ ತಾ (ತೃ).

ಕೃಷಿ ಪಂಡಿತ ಪ್ರಶಸ್ತಿ: ಕೃಷಿ ವಲಯದ ನಾಲ್ಕು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮತ್ತು ಆವಿಷ್ಕಾರ ಮಾಡಿರುವ ರೈತರಿಗೆ ‘ಕೃಷಿ ಪಂಡಿತ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಥಮ ಬಹುಮಾನಕ್ಕೆ 1 ಲಕ್ಷ, ದ್ವಿತೀಯ  50 ಸಾವಿರ ಮತ್ತು ತೃತೀಯ ಬಹುಮಾನಕ್ಕೆ 25 ಸಾವಿರ ನಗದು ಪುರಸ್ಕಾರ ನೀಡಲಾಯಿತು.
 

ಇವರು ಇತರ ಪ್ರಶಸ್ತಿ ಪುರಸ್ಕೃತರು
ಸಮಗ್ರ ಕೃಷಿ ಪದ್ಧತಿ ಮತ್ತು ಬೆಳೆಗಳ ವೈವಿದ್ಧೀಕರಣ: ಎಚ್.ಸದಾನಂದ, ತಪಸಿಹಳ್ಳಿ, ದೊಡ್ಡಬಳ್ಳಾಪುರ ತಾ. (ಪ್ರ). ಸುಬ್ಬಾರೆಡ್ಡಿ, ಕೈವಾರ, ಚಿಂತಾಮಣಿ ತಾ; ಆಂಜನಪ್ಪ ಮತ್ತು ಪಾರ್ವತಮ್ಮ, ಅವರಗೆರೆ, ದಾವಣಗೆರೆ ತಾ; ಶಾರದಮ್ಮ, ಕಳ್ಳಿಕೊಪ್ಪಲು, ಆಲೂರು ತಾ, ಹಾಸನ ಜಿಲ್ಲೆ; ಕೆ.ವಿ.ಕೃಷ್ಣರಾವ್, ಮಾಡಗಿರಿ ಕ್ಯಾಂಪ್, ಮಾನ್ವಿ ತಾ, ರಾಯಚೂರು ಜಿಲ್ಲೆ; ಶಿವಪ್ಪ ಹನುಮಪ್ಪ ಹಾದಿಮನಿ, ಕಟಗಿನಹಳ್ಳಿ, ಬಾದಾಮಿ ತಾ; ಮರಿಸ್ವಾಮಿ ಎನ್.ಬಳ್ಳಾರಿ, ಎಕ್ಲಾಸ್‌ಪುರ, ಮಾನ್ವಿ ತಾ; ಸುವರ್ಣಮ್ಮ ಮತ್ತು ಪ್ರಭಾಕರಗೌಡ, ರಾಮೇಶ್ವರ, ಹೊನ್ನಾಳಿ ತಾ; ಕೆ.ಬಿ.ಮುನಿರಾಜ ಬಲ್ಲಾಳ, ಮಾಳ ಗ್ರಾಮ, ಕಾರ್ಕಳ ತಾ; ರಮೇಶ ಮಲ್ಲನಗೌಡ ಪಾಟೀಲ, ತೊದಲಬಾಗಿ, ಜಮಖಂಡಿ ತಾ; ಬಿ.ಎಂ.ಶಿವಯೋಗಿ ಮತ್ತು ಸೌಮ್ಯ, ಬೇವಿನಹಳ್ಳಿ, ಹರಪನಹಳ್ಳಿ ತಾ; ಜಾನ್ ವೇಗಾಸ್ ಚೇಳೂರು, ಬಂಟ್ವಾಳ ತಾ; ಕೆ.ಸಿ.ಶಿವರಾಮೇಗೌಡ, ಕಿಲಾರ, ಮಂಡ್ಯ ತಾ; ಎಚ್.ಎನ್.ತಿಮ್ಮಪ್ಪ, ಹೊಸಹಳ್ಳಿ, ಸಾಗರ ತಾ (ಎಲ್ಲರಿಗೂ ತೃತೀಯ ಬಹುಮಾನ).

ಸಾವಯವ ಕೃಷಿ: ಬಸಪ್ಪ ಚನ್ನಬಸಪ್ಪ ಹಂಡಿ, ಕನ್ನೇನನಾಯಕನಕೊಪ್ಪ, ಕಲಘಟಗಿ ತಾ (ಪ್ರ); ಅಶೋಕ ರಾಮು ಧುಮಾಳೆ, ಖಡಕಲಾಟ, ಚಿಕ್ಕೋಡಿ ತಾ (ತೃ).
ನೀರಿನ ಸಮರ್ಥ ಬಳಕೆ: ಟಿ.ಕೊಟ್ರಪ್ಪ, ಗದ್ದಿಕೇರಿ, ಹಗರಿಬೊಮ್ಮನಹಳ್ಳಿ; ಪಂಪನಗೌಡ ದಂಡಪ್ಪಗೌಡ, ಮುದನಾಳ, ಶರಣಸಿರಸಗಿ, ಗುಲ್ಬರ್ಗ ತಾ; ನಿರಪಾದಯ್ಯ ಕಳಕಯ್ಯ ಕಾರಡಗಿ ಮಠ, ಕುಂಟೋಜಿ, ರೋಣ ತಾ. (ಎಲ್ಲರಿಗೂ ತೃತೀಯ). ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ: ಪರಮಾನಂದ ಮಾನಪ್ಪ ಬಡಿಗೇರ, ಸಿಂ
ಧಗಿ ರಸ್ತೆ, ವಿಜಾಪುರ (ದ್ವಿತೀಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT