ಹೊಸದುರ್ಗ: ಗ್ರಾಮೀಣ ಜನರು ಇತ್ತೀಚಿನ ದಿನಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬೊಮ್ಮೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀರಂಗನಾಥ ಮತ್ತು ಕರಿಯಮ್ಮದೇವಿ ದೇವಾಲಯಗಳ ಪ್ರಾರಂಭೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಆಧುನಿಕ ಬದುಕಿನತ್ತ ಆಕರ್ಷಣೆ ಬೆಳೆಸಿಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದ ಯುವಜನತೆ ಕೃಷಿಯನ್ನು ನಿರ್ಲಕ್ಷಿಸಬಾರದು. ನಮ್ಮಮೂಲ ಕಸುಬು ಕೃಷಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳದೇ ವ್ಯವಸ್ಥಿತವಾಗಿ ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ. ಲಕ್ಕಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ರತ್ನಮ್ಛ್ಮ, ಸದಸ್ಯರಾದ ಕಾಂತರಾಜು, ಶಂಕರಮ್ಮ, ದೊಡ್ಡಮ್ಮ, ಚಂದ್ರಮ್ಮ, ಬಿಜೆಪಿ ಮುಖಂಡ ಮಾಚೇನಹಳ್ಳಿ ಬಸಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.ಸಮಾರಂಭಕ್ಕೆ ಆಗಮಿಸಿದ್ದ ಅಕ್ಕಪಕ್ಕದ ಗ್ರಾಮಗಳ ದೇವರುಗಳ ಮೆರವಣಿಗೆ ವೈಭವದಿಂದ ನೆರವೇರಿತು. ಜಾನಪದ ಕಲಾಮೇಳದೊಂದಿಗೆ ನಡೆದ ಮೆರವಣಿಗೆಯಲ್ಲಿ ಪೂರ್ಣ ಕುಂಭಹೊತ್ತ ನೂರಾರು ಮಹಿಳೆಯರು ಎಲ್ಲರ ಗಮನ ಸೆಳೆದರು.
ಕ್ರೀಡಾ ಸಮಾರೋಪ
ಚಿತ್ರದುರ್ಗ: ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಯ ಅವಿಭಾಜ್ಯ ಅಂಗ ಎಂದು ನಿವೃತ್ತ ಪ್ರಾಂಶುಪಾಲ ಎಂ. ಕರಿಯಪ್ಪ ಹೇಳಿದರು. ತಳುಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳ ಸಮಾರೋಪದಲ್ಲಿ ಅವರು ಮಾತನಾಡಿದರು. ದ್ವಿತೀಯ ಪಿಯು ಆಂಗ್ಲ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಳಕು ಗ್ರಾ.ಪಂ. ಅಧ್ಯಕ್ಷ ಟಿ. ನಾಗರಾಜ್ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಭಗವಂತ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ರತ್ನಮ್ಮ, ಸೈಯದ್ ಸಮೀವುಲ್ಲಾ ಹಾಜರಿದ್ದರು.