ಸಾಗರ: ತಾಲ್ಲೂಕಿನ ಕುಗ್ವೆ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ ವಸತಿ ಉದ್ದೇಶಕ್ಕಾಗಿ 101 ಎಕರೆ ಕೃಷಿಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವು ದನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಎಚ್. ಹಾಲಪ್ಪ ಹೇಳಿದರು.
ಕುಗ್ವೆ ಗ್ರಾಮದಲ್ಲಿ ಮಂಗಳವಾರ ಉದ್ದೇಶಿತ ಭೂಸ್ವಾಧೀನ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಗ್ರಾಮಸ್ಥರು ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ಬೆಳೆದಿರುವ ಹಾಗೂ ಈಗಾಗಲೇ ಮನೆ ಇರುವ ಇಲ್ಲಿನ ಪ್ರದೇಶವನ್ನು ವಸತಿ ಉದ್ದೇಶಕ್ಕೆ ಗೃಹಮಂಡಳಿ ಸ್ವಾಧೀನಕ್ಕೆ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದರು.
ಕರ್ನಾಟಕ ಗೃಹಮಂಡಳಿ ಭೂಸ್ವಾಧೀನ ಪ್ರಕ್ರಿಯೆ ಮಾಡುವ ಸಂಬಂಧ ಪ್ರಕಟಣೆ ಹೊರಡಿಸಿದ ಮಾತ್ರಕ್ಕೆ ರೈತರು ಆತಂಕ ಪಡುವ ಅಗತ್ಯವಿಲ್ಲ. ಈ ವಿಷಯದಲ್ಲಿ ಅನಾವಶ್ಯಕವಾಗಿ ನನ್ನ ಹೆಸರನ್ನು ಎಳೆಯಲಾಗುತ್ತಿದೆ.
ನನ್ನ ಗಮನಕ್ಕೆ ಬಾರದೆ ಗೃಹಮಂಡಳಿ ಪ್ರಕಟಣೆ ಹೊರಡಿಸಿದೆ. ಹೀಗಿರುವಾಗ ರೈತರಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುವುದು ಮುಖ್ಯವೇ ಹೊರತು ವಿಷಯವನ್ನು ರಾಜಕೀಕರಣಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಕುಗ್ವೆ ಗ್ರಾಮದಲ್ಲಿ ರೈತರ ಕೃಷಿಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿ ಈಗಾಗಲೇ ಗೃಹ ಮಂಡಳಿಗೆ ಪತ್ರ ಬರೆದಿದ್ದೇನೆ. ವಸತಿ ಉದ್ದೇಶಕ್ಕೆ ಬೇಡಿಕೆ ಇಲ್ಲದೆ ಇದ್ದರೂ ಗೃಹಮಂಡಳಿ ರೈತರ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿಕುಗ್ವೆ, ಜಿ.ಪಂ. ಸದಸ್ಯೆ ಲಲಿತಾ ನಾರಾಯಣ್, ತಾ.ಪಂ. ಸದಸ್ಯ ಮಹಾಬಲೇಶ್ವರ್, ಗ್ರಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ, ಈಶ್ವರ್ನಾಯ್ಕ, ಅ.ರಾ. ಶ್ರೀನಿವಾಸ್, ವಿ.ಟಿ. ಸ್ವಾಮಿ, ಎಚ್.ಎಲ್. ರಾಘವೇಂದ್ರ ಇನ್ನಿತರರು ಹಾಜರಿದ್ದರು.