ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಂಥನ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಎಂ.ಎನ್‌.ಹೆಗಡೆ, ಶಿರಸಿ
ನಮ್ಮಲ್ಲಿ ಐದು ಹಸುಗಳಿವೆ. ಇತ್ತೀಚೆಗೆ ಒಂದು ಹಸು ಆಹಾರ ತಿನ್ನದೇ ಮೈಯೆಲ್ಲ ದದ್ದರಿಸಿಕೊಂಡು ಸತ್ತು ಹೋಯಿತು. ಇದಕ್ಕೆ ಏನು ಕಾರಣ. ಮುಂದೆ ಹೀಗಾಗದಂತಿರಲು ಏನು ಮಾಡಬೇಕು.
ಉ: 400 ಕಿ.ಮೀ. ದೂರದಿಂದ ನಿಮ್ಮ ಹಸುವಿನ ಸಾವಿಗೆ ಕಾರಣ ತಿಳಿಸಲಾರೆ. ದಯವಿಟ್ಟು ಹತ್ತಿರದ ಪಶುಸಂಗೋಪನಾ ಇಲಾಖೆಯವರಿಂದ ನಿಮ್ಮ ಉಳಿದ 4 ಹಸುಗಳ ತಪಾಸಣೆ ಮಾಡಿಸಿರಿ.

ಮನೋಜ್‌ಕುಮಾರ್‌ ಎಸ್‌. ಸೂಲಗತ್ತಿ
ಕರಿಮೆಣಸಿನ ಬಳ್ಳಿಗಳು ಬೇರು ಕೊಳೆತು ಒಣಗುತ್ತಿವೆ. ಈ ವರ್ಷ ಮಳೆ ಜಾಸ್ತಿ ಬಂದಿದೆ. ಈ ರೋಗ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ಬರುತ್ತದೆ. ಇದರ ನಿಯಂತ್ರಣ ಹೇಗೆ ತಿಳಿಸಿರಿ. ನಾನು ಸಾವಯವ ಪದ್ಧತಿ ಅನುಸರಿಸುತ್ತಿದ್ದೇನೆ. ಸಾವಯವ ಪದ್ಧತಿಯ ನಿಯಂತ್ರಣ ಕ್ರಮಗಳನ್ನು ತಿಳಿಸಿ.
ಉ: ಕರಿ ಮೆಣಸಿನ ಬಳ್ಳಿಗಳಿಗೆ ಮಳೆಗಾಲದಲ್ಲಿ ಹೆಚ್ಚು ತೇವದ ಬಾಧೆ ಇಲ್ಲದಂತೆ ಎಚ್ಚರವಹಿಸಿ. 2 ತಿಂಗಳಿಗೊಮ್ಮೆ ಮಳೆಗಾಲದಲ್ಲಿ ತಪ್ಪದೆ ಬೋರ್ಡೊ ದ್ರಾವಣ ಸಿಂಪಡಿಸಿರಿ. 200 ಮಿ.ಲೀ. 8 ದಿನ ಹುದುಗಿಸಿದ ಹುಳಿ ಮೊಸರನ್ನು 4 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ.

ಮಾದೇವಪ್ಪ ರಾಜಕುಮಾರ್‌,- ಗೋಣಿಕೊಪ್ಪಲು
ನಮ್ಮ ಭಾಗದಲ್ಲಿ ಬಹಳ ಜನ ನಿಂಬೆ, ಮೂಸಂಬಿ, ಗಜನಿಂಬೆ ಬೆಳೆದಿದ್ದಾರೆ. ಇವುಗಳಿಗೆ ಒಂದು ರೀತಿ ಕಜ್ಜಿ ಕಾಣಿಸಿಕೊಂಡು ಗಿಡವೂ ಬೆಳೆಯುತ್ತಿಲ್ಲ. ಇಳುವರಿಯೂ ಕಡಿಮೆಯಾಗುತ್ತಿದೆ. ನಾವು ಒಂದೆರಡು ಬಾರಿ ಕೀಟನಾಶಕವನ್ನೂ ಸಿಂಪಡಿಸಿದೆವು. ಆದರೂ ಪ್ರಯೋಜನವಾಗಿಲ್ಲ. ಏನು ಮಾಡುವುದು ತಿಳಿಸಿ.
ಉ: ಎಲ್ಲಾ ನಿಂಬೆ ಜಾತಿ (ಸಿಟ್ರಸ್) ಬೆಳೆಗಳಿಗೂ 20 ದಿನಕ್ಕೊಮ್ಮೆ 10 ಲೀಟರ್ ಗಂಜಲದಲ್ಲಿ 100 ಗ್ರಾಂ ಮೈಲು ತುತ್ತವನ್ನು 1 ರಾತ್ರಿ ನೆನೆಸಿಟ್ಟು 50 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಿಸಿ. ಕಾಯಿ ಕಜ್ಜಿ – ಎಲೆ ಮುರುಟಿಕೊಳ್ಳುವ ಬಾಧೆ ನಿವಾರಿಸಬಹುದು.

ರಮ್ಯಾ ಜೆ.ಎಂ,- ಕೊಡಗು
ನಾನು ಸಾವಯವ ಬೇಸಾಯಗಾರ. ಅಜೋಸ್ಪೇರಿಲಂ ಎಂಬ ಗೊಬ್ಬರದ ಬಳಕೆಯನ್ನು ಏಕದಳ ಧಾನ್ಯಗಳಿಗೆ ಬಳಸಿರಿ ಎಂದು ಹೇಳುತ್ತಾರೆ. ಇದು ಹೇಗೆ ವಿವರವನ್ನು ತಿಳಿಸಿ.
ಉ: ಅಜೋಸ್ಪೆರಿಲಂ ಏಕದಳ ಧಾನ್ಯದ ಬೇರುಗಳಲ್ಲಿದ್ದುಕೊಂಡು ವಾತಾವರಣದಿಂದ ಸಾರಜನಕವನ್ನು ಹೀರಿಕೊಂಡು ಬೆಳೆಗೆ ಒದಗಿಸುವ ಸೂಕ್ಷ್ಮಾಣು. ಇದನ್ನು ಬೀಜೋಪಚಾರದಿಂದ, ಬೇರು ಅದ್ದಿ ತೆಗೆದು ನಾಟಿ ಮಾಡುವುದು.
15 ಕೆ.ಜಿ. ಚೆನ್ನಾಗಿ ಕಳಿತ ಗೊಬ್ಬರದ ಜತೆ ಬೆರೆಸಿ ತಂಪಾದ ವಾತಾವರಣದಲ್ಲಿ ಭೂಮಿಗೂ ಸೇರಿಸಬಹುದು.

ದಿನೇಶ್‌ ರಾವ್‌-, ಹುಬ್ಬಳ್ಳಿ
ನಾವು ಇತ್ತೀಚೆಗೆ ಪ್ರತಿ ವರ್ಷವೂ ಶುಂಠಿಯನ್ನು ಬೆಳೆಯುತ್ತೇವೆ. ಈಗಲೂ ಸುಮಾರು ಎರಡು ಎಕರೆ ಶುಂಠಿ ಬೆಳೆದಿದ್ದೇವೆ. ಇದರ ಎಲೆಗಳು ಉದುರಿ ಬೀಳುತ್ತಿವೆ. ಏನು ಮಾಡುವುದು ತಿಳಿಸಿ.
ಉ: ಈಗ ಶುಂಠಿ ಬೆಳೆಯುವ ಹಂತ ಮುಗಿದು ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೀಳುವ ಕಾಲ. ಒಂದು ವೇಳೆ ಶುಂಠಿ ಬೆಳೆ 5–6 ತಿಂಗಳ ವಯಸ್ಸಿಗೆ ಮೊದಲೇ ಈ ತೊಂದರೆಯಿದ್ದರೆ ರೋಗವಿರಬಹುದು. ರೋಗ ನಾಶಕ ಬಳಸಿರಿ.

ಪಾಟಲಿಪುತ್ರಪ್ಪ-, ತಲಕಾಡು
ನಾನು ಅರ್ಧ ಎಕರೆಯಲ್ಲಿ ಏಲಕ್ಕಿ ಬೆಳೆದಿದ್ದೇನೆ. ಇನ್ನೂ ಒಂದೂವರೆ ಎಕರೆಯಲ್ಲಿ ಬೆಳೆಯಬೇಕೆಂದಿದ್ದೇನೆ. ಸಸಿಗಳನ್ನು ಬೆಳೆಸಿಕೊಳ್ಳುವ ವಿಧಾನ ತಿಳಿಸಿರಿ.
ಉ: ಏಲಕ್ಕಿಯನ್ನು ನೀವು ಬೆಳೆಸಿ ಸಸಿ ಮಾಡುವುದಕ್ಕಿಂತ ಏಲಕ್ಕಿ ಮಂಡಳಿ (ಸ್ಪೈಸ್‌) ಅವರಿಂದ ಉತ್ತಮವಾದ ಸಸಿ ತರುವುದು ವಾಸಿ.

ಮನೋಜ್‌ ಕುಮಾರ್,- ಮಂಗಳೂರು
ನುಗ್ಗೆ ಬೆಳೆಗೆ ಮಿಶ್ರ ಬೆಳೆಯಾಗಿ ಲವಂಗ ಬೆಳೆಯಬಹುದೇ?
ನುಗ್ಗೆ ಗಿಡದ ನೆರಳಲ್ಲಿ ಲವಂಗ ಮಿಶ್ರ ಬೆಳೆಯಾಗಿ ಬೆಳೆಯಬಹುದು. ನುಗ್ಗೆ ಗಿಡ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಬೇಸಿಗೆಯಲ್ಲಿ 15 ದಿನಕ್ಕೊಮ್ಮೆ ನೀರು ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT