ಧಾರವಾಡ: ಕೃಷಿ ಮೇಳ ಆರಂಭವಾಗಲು ಇನ್ನೊಂದೇ ಬಾಕಿ ಉಳಿದಿದ್ದು, ಇಲ್ಲಿನ ಕೃಷಿ ವಿ.ವಿ. ಆವರಣದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಆಡಳಿತ ಕಚೇರಿಯ ಮುಂಭಾಗದ ಬೆಳೆ ಪ್ರಾತ್ಯಕ್ಷಿಕೆ ತಾಕುಗಳಿಗೆ ಹೊಂದಿಕೊಂಡಂತೆ ಇರುವ ವೇದಿಕೆಯ ಮುಂಭಾಗದಲ್ಲಿ ಬೃಹತ್ ಪೆಂಡಾಲ್ ಹಾಕುವ ಕಾರ್ಯವೂ ಗುರುವಾರ ಬಹುತೇಕ ಅಂತಿಮ ಹಂತದಲ್ಲಿತ್ತು. ಫೈಬರ್ ಕವಚವುಳ್ಳ ಹೈಟೆಕ್ ಮಳಿಗೆಗಳು, ಸಾಮಾನ್ಯ ಮಳಿಗೆಗಳು, ತೋಟಗಾರಿಕೆ, ಜಲಾನಯನ ಇಲಾಖೆಯ ಪ್ರಾತ್ಯಕ್ಷಿಕೆಗಳು ಇರುವ ಮಳಿಗೆಗಳಲ್ಲಿ ಕೃತಕ ಸಸಿಗಳನ್ನು ನೆಡುವ ಕಾರ್ಯವೂ ನಡೆಯಿತು. ಜಿಲ್ಲಾ ಪಂಚಾಯಿತಿಯ ತೋಟಗಾರಿಕೆ ಹಾಗೂ ಜಲಾನಯನ ಇಲಾಖೆಗಳ ಅಧಿಕಾರಿಗಳು ಖುದ್ದು ಮುಂದೆ ನಿಂತು ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು.
ಆವರಣದಲ್ಲಿ ಕೃಷಿ ಮೇಳಕ್ಕೆ ಸಂಬಂಧಿಸಿದ ಫ್ಲೆಕ್ಸ್ಗಳನ್ನು ಹಾಕುವಲ್ಲಿ ಕಾರ್ಮಿಕರು ತೊಡಗಿಕೊಂಡಿದ್ದರು. ವಿ.ವಿ. ದ್ವಾರ ಬಾಗಿಲಿಗೆ ಬೃಹತ್ ಗಾತ್ರದ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ.
‘ಆಹಾರ ಭದ್ರತೆಗಾಗಿ ಜಲಸಂರಕ್ಷಣೆ’ ಎಂಬ ಆಶಯದೊಂದಿಗೆ ನಡೆಯಲಿರುವ ಈ ಕೃಷಿ ಮೇಳದಲ್ಲಿ ಜಲಸಂರಕ್ಷಣೆಯ ವಿಧಾನಗಳನ್ನು ತಿಳಿಸಿಕೊಡಲು ವಿ.ವಿ.ಯ ಆರು, ಕೇಂದ್ರೀಯ ಅಂತರ್ಜಲ ಮಂಡಳಿ ಹಾಗೂ ಜಲಾನಯನ ಇಲಾಖೆಯ ತಲಾ ಎರಡು ಮಳಿಗೆಗಳನ್ನು ಮುಖ್ಯ ಸ್ಥಳದಲ್ಲಿ ಸ್ಥಾಪಿಸುವ ಕೆಲಸವೂ ಪ್ರಗತಿಯಲ್ಲಿತ್ತು. ಕೃಷಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಹಲವು ತಂಡಗಳನ್ನು ರಚಿಸಲಾಗಿದ್ದು, ಮೇಳದ ಸಂದರ್ಭದಲ್ಲಿ ವಿವಿಧ ಮಳಿಗೆಗಳ ಬಳಿ ಇರಲು ಪಾಳಿ ಪ್ರಕಾರ ಕೆಲಸ ನಿರ್ವಹಿಸುವಂತೆ ತಂಡಗಳಿಗೆ ಆಯಾ ವಿಭಾಗಗಳ ಮುಖ್ಯಸ್ಥರು ಸೂಚನೆ ನೀಡಿದ್ದಾರೆ.