ಬೆಂಗಳೂರು: `ಕೃಷಿ ವಿಶ್ವವಿದ್ಯಾಲಯ, ಮಣ್ಣು ವಿಜ್ಞಾನ ವಿಭಾಗದ ಬೆಂಗಳೂರು ಘಟಕ ಹಾಗೂ ಅಂತರರಾಷ್ಟ್ರೀಯ ಸಮಿತಿಯ ಸಹಯೋಗದಲ್ಲಿ ಅಕ್ಟೋಬರ್ 18 ರಿಂದ ಐದು ದಿನಗಳ ವರೆಗೆ `ಅತಿ ಕಡಿಮೆ ಆಮ್ಲೀಯ ವಾತಾವರಣದಲ್ಲಿ ಸಸ್ಯ ಮತ್ತು ಮಣ್ಣಿನ ಸಂಬಂಧ~ ಕುರಿತು ಎಂಟನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ~ ಎಂದು ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣ ಗೌಡ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಮ್ಮೇಳನವು ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ನಡೆಯಲಿದ್ದು, ಸಮ್ಮೇಳನವನ್ನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನೇಮಕಾತಿ ಮಂಡಳಿಯ ಮಾಜಿ ಅಧ್ಯಕ್ಷರಾದ ಡಾ.ಕೀರ್ತಿ ಸಿಂಗ್ ಉದ್ಘಾಟಿಸುವರು. ಕಾರ್ನಲ್ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಲಿಯೋನ್ ಕೊಶಿಯನ್ ಅವರು ಸಮ್ಮೇಳನ ಕುರಿತು ಮಾಹಿತಿ ನೀಡುವರು. ನವದೆಹಲಿಯ ಭಾರತೀಯ ಮಣ್ಣು ವಿಜ್ಞಾನಿಗಳ ಸಂಘದ ಅಧ್ಯಕ್ಷ ಡಾ.ಆರ್.ಪಿ.ಸಿಂಗ್ ಅತಿಥಿಗಳಾಗಿ ಆಗಮಿಸುವರು~ ಎಂದರು.
`ಅಮೇರಿಕಾ, ಜಪಾನ, ಚೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಇರಾನ್ ಸೇರಿದಂತೆ ಮತ್ತಿತರ ದೇಶದ ವಿಜ್ಞಾನಿಗಳು ಪ್ರಬಂಧವನ್ನು ಮಂಡಿಸುವರು. ಸಮ್ಮೇಳನದಲ್ಲಿ ಮೂರು ಪ್ರಾಸ್ತಾವಿಕ ಭಾಷಣಗಳು ಮತ್ತು ಹದಿನೈದು ಮುಖ್ಯಭಾಷಣಗಳನ್ನು ಏರ್ಪಡಿಸಲಾಗಿದ್ದು, ಒಟ್ಟು 180 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಇದೇ ಸಂದರ್ಭದಲ್ಲಿ ವೈಜ್ಞಾನಿಕ ಕಿರು ಹೊತ್ತಿಗೆಗಳು ಬಿಡುಗಡೆಯಾಗಲಿವೆ~ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಮಣ್ಣುವಿಜ್ಞಾನಿಗಳ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಡಾ.ಎಂ.ಎಸ್.ಬದ್ರಿನಾಥ್, ಸಮ್ಮೇಳನದ ಸಮಿತಿಯ ಕಾರ್ಯದರ್ಶಿ ಡಾ.ಎನ್.ಬಿ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.