ರಾಯಚೂರು: ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮ ಪಂಚಾಯಿತಿಯು 2010-11ನೇ ಸಾಲಿನ ಕ್ರಿಯಾ ಯೋಜನೆಯಡಿ ತೆಗೆದುಕೊಂಡ ಕೃಷಿ ಹೊಂಡದ ಕಾಮಗಾರಿಗಳು ಶೇ 80ರಷ್ಟು ನಕಲಿ ಫಲಾನುಭವಿಗಳಿಂದ ಕೂಡಿವೆ. ಶೇ 20ರಷ್ಟು ಕಾಮಗಾರಿ ಯಂತ್ರಗಳಿಂದ ಮಾಡಿಸಲಾಗಿದೆ. ಸಂಪೂರ್ಣ ನಕಲಿ ಕ್ರಿಯಾ ಯೋಜನೆ ಇದಾಗಿದೆ. 59 ಲಕ್ಷ 67 ಸಾವಿರ ಅಕ್ರಮ ನಡೆದಿದೆ. ಈ ಪಂಚಾಯಿತಿ ಸೂಪರ್ಸೀಡ್ ಮಾಡಬೇಕು.
ಆಡಳಿತದ ವಿರುದ್ಧ ವಂಚನೆ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೆ ನಾಗಲಿಂಗಸ್ವಾಮಿ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪಗಲ್ ಗ್ರಾಮ ಪಂಚಾಯಿತಿಯಲ್ಲಿ ಕ್ರಿಯಾ ಯೋಜನೆ ತಯಾರಿಸುವಾಗಲೇ ನಕಲಿ ಸರ್ವೆ ನಂಬರ್ ಬಳಸಲಾಗಿದೆ. ಸರ್ಕಾರಿ ಜಾಗೆ ಸರ್ವೆ ನಂಬರ್ಗೆ ಗ್ರಾಮದ ಹಲವಾರು ಜನರ ಹೆಸರನ್ನು ದಾಖಲಾತಿಯಲ್ಲಿ ತೋರಿಸಲಾಗಿದೆ. ಆ ಜನರಿಗೆ ಈ ವಿಷಯವೂ ಗೊತ್ತಿಲ್ಲ. ಈ ರೀತಿ ನಕಲಿ ಫಲಾನುಭವಿ ಸೃಷ್ಟಿಸಿ ಕೃಷಿ ಹೊಂಡ ನಿರ್ಮಾಣಕ್ಕೆ ಹಣ ಎತ್ತಲಾಗಿದೆ ಎಂದು ಆರೋಪಿಸಿದರು.
ಕ್ರಿಯಾ ಯೋಜನೆಯಲ್ಲಿ ತೆಗೆದುಕೊಂಡಿರುವ ಒಟ್ಟು 109 ಕೃಷಿ ಹೊಂಡಗಳಲ್ಲಿ 75 ಕೃಷಿ ಹೊಂಡಗಳು ಜಮೀನುಗಳಿಲ್ಲದವರ ಹೆಸರು ಬಳಸಲಾಗಿದೆ. ಪಂಚಾಯಿತಿ ಆಡಳಿತವೇ ಸರ್ಕಾರಕ್ಕೆ ಸುಳ್ಳು ಮಾಹಿತಿಯನ್ನು ನೀಡಿ ವಂಚನೆ ಮಾಡಿದೆ. ಒಂದು ಕೃಷಿ ಹೊಂಡಕ್ಕೆ 45 ಸಾವಿರ ದೊರಕಿಸಲಾಗುತ್ತದೆ ಎಂದು ಆರೋಪಿಸಿದರು.
ಕಪಗಲ್ ಗ್ರಾಪಂ ಜಮೀನಿನ ಸರ್ವೆ 25 ಮತ್ತು 30 ಇದೆ. ಎರಡು ಸರ್ವೆ ನಂಬರ್ ಹೆಸರಿನಲ್ಲಿ ನಕಲಿ ಹೆಸರು ದಾಖಲಿಸಿ ಕೃಷಿ ಹೊಂಡ ನಿರ್ಮಿಸಿದ ಬಗ್ಗೆ ದಾಖಲೆ ಸೃಷ್ಟಿ ಮಾಡಲಾಗಿದೆ. ಇದೇ ಗ್ರಾಪಂ ವ್ಯಾಪ್ತಿಯ ಬೊಮ್ಮನಾಳ ಸೀಮಾಂತರದ ಸರ್ವೆ ನಂಬರ 211,138 ಮತ್ತು 510ರಲ್ಲಿ 5 ಕೃಷಿ ಹೊಂಡ, ಬೆಟ್ಟದೂರು ಸೀಮಾಂತರದಲ್ಲಿ ಸರ್ವೆ ನಂಬರ್ 150 ಮತ್ತು 166ರಲ್ಲಿ 2 ಕೃಷಿ ಹೊಂಡ, ಮುರಹರಪುರ ತಾಂಡಾ ಸೀಮಾಂತರದಲ್ಲಿ ಸರ್ವೆ ನಂಬರ್ 95 ಇಲ್ಲಿ ಕೃಷಿ ಹೊಂಡ ನಿರ್ಮಿಸಿದ ಬಗ್ಗೆ ಕ್ರಿಯಾ ಯೋಜನೆ ದಾಖಲೆಯಲ್ಲಿ ತೋರಿಸಲಾಗಿದೆ. ಆದರೆಇವು ಕಂದಾಯ ಇಲಾಖೆ ಸರ್ವೆ ನಂಬರ್ ಇಲ್ಲ ಎಂದು ಹೇಳಿದರು.
ಈ ಕ್ರಿಯಾ ಯೋಜನೆಯಡಿ ಬದು ನಿರ್ಮಾಣಕ್ಕೆ ಒಟ್ಟು 5 ಜಮೀನು ಆಯ್ದುಕೊಳ್ಳಲಾಗಿದೆ. ಈ ಸರ್ವೆ ನಂಬರಗಳೆಲ್ಲವೂ ನಕಲಿ ಫಲಾನುಭವಿಗಳ ಸರ್ವೆ ನಂಬರ್ಗಳಾಗಿವೆ. ಬೊಮ್ಮನಾಳ ಸೀಮಾಂತರದ ಸರ್ವೆ ನಂಬರ್ 31ರಲ್ಲಿ ಒಟ್ಟು 8 ಕೃಷಿ ಹೊಂಡ ಕಾಮಗಾರಿ ಕೈಗೆತ್ತಿಕೊಂಡಿದ್ದು, 8 ಕಾಮಗಾರಿಗಳ ಫಲಾನುಭವಿಗಳಲ್ಲಿ 1 ಮಾತ್ರ ನಿಜವಾದ ಫಲಾನುಭವಿಯದ್ದಾಗಿದೆ. 7 ಫಲಾನುಭವಿಗಳು ನಕಲಿ ಫಲಾನುಭವಿಗಳಾಗಿದ್ದಾರೆ ಎಂದು ಆರೋಪಿಸಿದರು.
ಬೊಮ್ಮನಾಳ ಸೀಮಾಂತರದ ಸರ್ವೆ ನಂಬರ್ 10ರಲ್ಲಿ ಒಟ್ಟು 4 ಕೃಷಿ ಹೊಂಡಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 4 ಕೃಷಿ ಹೊಂಡಗಳ ಫಲಾನುಭವಿಗಳು ನಕಲಿಗಳಿದ್ದಾರೆ. ಅದೇ ರೀತಿ ಸರ್ವೆ ನಂಬರ್ 2ರಲ್ಲಿ 4 ಕೃಷಿ ಹೊಂಡ ಕಾಮಗಾರಿ ತೆಗೆದುಕೊಂಡಿದ್ದು, 3 ಫಲಾನುಭವಿ ನಕಲಿ ಫಲಾನುಭವಿಗಳಾಗಿದ್ದಾರೆ. ಸರ್ವೆ ನಂಬರ್ 57ರಲ್ಲಿ 3 ಕೃಷಿ ಹೊಂಡಗಳ ಕಾಮಗಾರಿ ತೆಗೆದುಕೊಂಡಿದ್ದು, ಮೂವರು ನಕಲಿ ಫಲಾನುಭವಿಗಳಾಗಿದ್ದಾರೆ. ಸರ್ವೆ ನಂಬರ 92ರಲ್ಲಿ 2, ಸರ್ವೆ ನಂಬರ 80ರಲ್ಲಿ 3 ನಕಲಿ ಫಲಾನುಭವಿಗಳಿದ್ದಾರೆ ಎಂದು ಆಪಾದಿಸಿದರು.
ಅದೇ ಬೆಟ್ಟದೂರು ಸೀಮಾಂತರದ ಸರ್ವೆ ನಂಬರ 96ರಲ್ಲಿ 4 ಕೃಷಿ ಹೊಂಡ ನಿರ್ಮಾಣ ಕಾಮಗಾರಿ ತೆಗೆದುಕೊಂಡಿದ್ದು, 2 ನಕಲಿ ಫಲಾನುಭವಿಗಳಿದ್ದಾರೆ. ಇದೇ ಗ್ರಾಮದ ಸೀಮಾಂತರದ ಸರ್ವೆ ನಂಬರ 87ರಲ್ಲಿ 2 ಫಲಾನುಭವಿ, ಕಪಗಲ್ ಸೀಮಾಂತರದ ಸರ್ವೆ ನಂಬರ್ 12ರಲ್ಲಿ 4 ನಕಲಿ ಫಲಾನುಭವಿಗಳಿದ್ದಾರೆ ಎಂದು ಆರೋಪಿಸಿದರು.
ಶೇ 90ರಷ್ಟು ನಕಲಿ ಫಲಾನುಭವಿಗಳನ್ನು ಒಳಗೊಂಡು ನಕಲಿ ಕ್ರಿಯಾ ಯೋಜನೆಯನ್ನು ಅನುಮೋದಿಸಿ ಸರ್ಕಾರಕ್ಕೆ ವಂಚನೆ ಮಾಡಿದ ಕಪಗಲ್ ಗ್ರಾಪಂನ್ನು ಸೂಪರ್ಸೀಡ್ ಮಾಡಬೇಕು, ಸುಮಾರು 60 ಲಕ್ಷ ಹಣ ದುರುಪಯೋಗಕ್ಕೆ ಕಾರಣವಾದ ಗ್ರಾಪಂ ಆಡಳಿತದ ವಿರುದ್ಧ ವಂಚನೆ ಪ್ರಕರಣ ದಾಖಲಿಸಬೇಕು, ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ದುರುಪಯೋಗಪಡಿಸಿಕೊಂಡ ಹಣವನ್ನು ಸರ್ಕಾರ ಅವರಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಜಮೀನುಗಳಿಲ್ಲದೇ 75 ಕೃಷಿ ಹೊಂಡ ಮತ್ತು 5 ಬದು ನಿರ್ಮಾಣ ಕಾಮಗಾರಿ ನಿರ್ವಹಣೆ ಆಗಿದೆ ಎಂದು ದೃಢೀಕರಿಸಿದ ಜಲಾನಯನ ಅಧಿಕಾರಿ ವಿರೂಪಾಕ್ಷಪ್ಪ ಅವರನ್ನು ಸೇವೆಯಿಂದ ಶಾಶ್ವತ ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಪಿಆರ್ಇಡಿ, ಅರಣ್ಯ ಇಲಾಖೆ ಅಧಿಕಾರಿಗಳನ್ನೂ ಸೇವೆಯಿಂದ ವಜಾ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ನಕಲಿ ಕ್ರಿಯಾ ಯೋಜನೆಗೆ ತಾಪಂನಿಂದ ಅನುಮೋದನೆ ನೀಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ ಕುಲಕರ್ಣಿ ಅವರನ್ನು ಸೇವೆಯಿಂದ ವಜಾಮಾಡಬೇಕು.
ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಲಾಗುವುದು. ಶೀಘ್ರ ತನಿಖೆ ನಡೆಸಿ ಕ್ರಮ ಜರುಗಿಸದೇ ಇದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಹೇಳಿದರು
.
ಕೆಆರ್ಎಸ್ ಮಾನ್ವಿ ತಾಲ್ಲೂಕು ಘಟಕದ ಕಾರ್ಯದರ್ಶಿ ಧರ್ಮಣ್ಣ ಚವ್ಹಾಣ, ಪಿ ವೆಂಕಟೇಶ, ರಾಘವೇಂದ್ರ ನಾಯ್ಕ, ಬಸವರಾಜ ಕವಿತಾಳ, ಬಂದೇನವಾಜ್, ಬಸವರಾಜ ಬಾಗಲವಾಡ, ಪಿ ವೆಂಕಟೇಶ, ಬಸವರಾಜ ಬಲ್ಲಂ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.