ಶಿವಮೊಗ್ಗ: ಈಚಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಿನ ಪಾತ್ರ ಮಹಿಳೆಯರದ್ದೇ ಆಗಿದೆ. ರೈತ ದೇಶದ ಬೆನ್ನೆಲುಬು ಆದರೆ, ರೈತನಿಗೆ ಬೆನ್ನೆಲುಬು ರೈತ ಮಹಿಳೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಶಿವಮೂರ್ತಪ್ಪ ಅಭಿಪ್ರಾಯಪಟ್ಟರು.
ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಕೃಷಿ ಇಲಾಖೆ (ಅತ್ಮ ಯೋಜನೆ) ಈಚೆಗೆ ನವಿಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ `ಕೃಷಿ ನಿರತ ಮಹಿಳಾ ದಿನಾಚರಣೆ-2012' ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿಯಲ್ಲಿ ಮಹಿಳೆಯರ ಪಾತ್ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ತರಕಾರಿ ಬೆಳೆಯುವಲ್ಲಿ, ಔಷಧ ಸಸ್ಯ ಉಳಿಸಿ-ಬೆಳೆಸುವಲ್ಲಿ ಮಹಿಳೆ ಯದ್ದು ಪ್ರಮುಖ ಪಾತ್ರ ಎಂದರು.
ಮಹಿಳೆಯರು ಕೃಷಿ ಚಟುವಟಿಕೆಗಳೊಂದಿಗೆ ದೈನಂದಿನ ಕೆಲಸ-ಕಾರ್ಯಗಳಾದ ಮಕ್ಕಳ ಲಾಲನೆ-ಪಾಲನೆ, ನೀರು-ಉರುವಲು ಸಂಗ್ರಹಣೆ, ಆಹಾರ ತಯಾರಿಕೆ, ಆಹಾರ ಸಂರಕ್ಷಣೆ, ಜಾನುವಾರು ಸಾಕಾಣಿಕೆಯ ಜತೆಗೆ ಕುಟುಂಬದ ನಿರ್ವಹಣೆಯನ್ನೂ ಕೂಡ ನಿರ್ವಹಿಸಲು ಸಬಲರಾಗಿದ್ದಾರೆ ಎಂದು ಹೇಳಿದರು.
ಸಹ ಸಂಶೋಧನಾ ನಿರ್ದೇಶಕ ಡಾ.ವೈ. ವಿಶ್ವನಾಥ ಶೆಟ್ಟಿ ಮಾತನಾಡಿ, ಆಡುಮುಟ್ಟದ ಸೊಪ್ಪಿಲ್ಲ, ಮಹಿಳೆ ಮಾಡದ ಕೆಲಸವಿಲ್ಲ. ಒಂದು ಕುಟುಂಬದ ಸಮೃದ್ಧಿಗೆ ಮತ್ತು ದೇಶದ ಸಮೃದ್ಧಿಗೆ ಮಹಿಳೆಯ ಪಾತ್ರ ಅತಿ ಮುಖ್ಯ ಎಂದರು.
ವಿಚಾರ ಸಂಕಿರಣದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್ (ಪ್ರಭಾರ) ಡಾ.ಎಂ. ಮಂಜುನಾಥ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಂ.ಎಸ್. ವಿಘ್ನೇಶ್, ಎಸ್. ಸಹನಾ ಉಪನ್ಯಾಸ ನೀಡಿದರು. ಕಾರ್ಯಕ್ರಮ ಸಂಯೋಜಕ ಡಾ.ಬಿ.ಸಿ. ಹನುಮಂತಸ್ವಾಮಿ ಮಾತನಾಡಿದರು. ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಟಿ.ಎಚ್. ಗೌಡ ವಹಿಸಿದ್ದರು. ವಿಷಯ ತಜ್ಞ ಡಾ.ಬಸವರಾಜ್ ಬೀರಣ್ಣವರ್ ಕಾರ್ಯಕ್ರಮ ನಿರೂಪಿಸಿದರು. ಆರ್. ನಾಗರಾಜ್ ವಂದಿಸಿದರು.