ಮೂಡಿಗೆರೆ: ರೈತರ ಜೀವನ ಸುಧಾರಣೆಯಾಗದೇ ಕೃಷಿ ಕ್ಷೇತ್ರ ಅಭಿವೃದ್ಧಿ ಸಾಧಿಸಲು ಅಸಾಧ್ಯ ಎಂದು ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಬಸವರಾಜು ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಫಲ್ಗುಣಿ ಗ್ರಾಮದ ಪ್ರಗತಿಪರ ರೈತ ಜಲೀಲ್ ಎಂಬುವವರ ಭತ್ತದ ಗದ್ದೆಯಲ್ಲಿ, ಬುಧವಾರ ಕೃಷಿ ವಿಜ್ಞನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಭತ್ತದ ಬೆಳೆಯ ಕ್ಷೇತ್ರೋತ್ಸವ ಮತ್ತು ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿ ಕ್ಷೇತ್ರ ಬೆಳವಣಿಗೆ ಸಾಧಿಸಲು ರೈತರು ಆರ್ಥಿಕವಾಗಿ ಸಬಲರಾಗಬೇಕು. ಆರ್ಥಿಕವಾಗಿ ಸಂಕಷ್ಟವನ್ನೇ ಎದುರಿಸುವ ರೈತಾಪಿ ವರ್ಗ ತಾವು ಬೆಳೆಯುವ ಬೆಳೆಗಳನ್ನು ಆಧುನೀಕರಣದ ಮೂಕ ಬೆಳೆಯುವಲ್ಲಿ ವಿಫಲರಾಗುತ್ತಿರುವುದು ಕೃಷಿ ಕ್ಷೇತ್ರದ ಹಿನ್ನೆಡೆಗೆ ಕಾರಣವಾಗಿದೆ. ಸರ್ಕಾರಗಳು ರೈತರಿಗಾಗಿ ಜಾರಿಗೆ ತರುವ ಯೋಜನೆಗಳು ನಿಜವಾದ ರೈತರಿಗೆ ತಲುಪಬೇಕು ಎಂದರು. ದೇಶದ ಜನರಿಗೆ ಅನ್ನ ನೀಡಲು ಭತ್ತದ ಬೆಳೆ ಕೃಷಿ ವಲಯದಲ್ಲಿ ಅವಶ್ಯಕವಾಗಿದ್ದು, ಅಂತಹ ಭತ್ತದ ಗದ್ದೆಗಳು ನಿವೇಶನಗಳಾಗಿ, ಶುಂಠಿ ಬೆಳೆಯ ಕೇಂದ್ರಗಳಾಗಿ ಮಾರ್ಪಾಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು.
ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಎಸ್.ಟಿ.ರಂಗಸ್ವಾಮಿ ಮತ್ತು ಹಿರಿಯ ಕ್ಷೇತ್ರಾಧಿಕಾರಿ ಡಾ.ದೇವರಾಜು ಕೃಷಿ ಕ್ಷೇತ್ರದ ಸರ್ಕಾರಿ ಪಾಲಿಸಿಗಳು, ಸಬ್ಸಿಡಿ ಯೋಜನೆಗಳು, ಕೃಷಿ ಕ್ಷೇತ್ರದಲ್ಲಿ ಎದುರಿಸುವ ಸವಾಲುಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತ ಅಬ್ದುಲ್ ಜಲೀಲ್, ವಿಷಯತಜ್ಞರಾದ ರೇವಣ್ಣನವರ್, ಲಾಲಿತ್ಯ, ಸುಕನ್ಯ, ಟಿ.ಪಿ. ಭರತ್ಕುಮಾರ್ ಇದ್ದರು.