ಸುರತ್ಕಲ್: ಕೃಷಿಯಲ್ಲಿ ಪ್ರಾಯೋಗಿಕ ಜ್ಞಾನ ಬಳಕೆಯಾದರೆ, ಕೃಷಿಗೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಗಳಿಂದ ತರಬೇತಿಯನ್ನೂ ನೀಡುತ್ತಿದ್ದರೆ ಕೃಷಿ ಉತ್ಪನ್ನದಲ್ಲಿ, ಬೆಳೆ ಇಳುವರಿಯಲ್ಲಿ ಹೆಚ್ಚಳ ಸಾಧ್ಯ ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಧ್ಯಕ್ಷ ಎಂ.ನರೇಂದ್ರ ಅಭಿಪ್ರಾಯಪಟ್ಟರು.
ಸುರತ್ಕಲ್ ವಿದ್ಯಾದಾಯಿನಿ ಕೃಷಿ-ಗ್ರಾಮೀಣ ತರಬೇತಿ ಕೇಂದ್ರ ಮತ್ತು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ಕೃಷಿ-ಗ್ರಾಮೀಣ ತರಬೇತಿ ಚಟುವಟಿಕೆ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.
ಸಾಂಪ್ರದಾಯಿಕ ಕೃಷಿ ಮತ್ತು ಆಧುನಿಕ ಕೃಷಿ ಪದ್ಧತಿ ನಡುವೆ ಸಮನ್ವಯತೆ ಸಾಧಿಸಬೇಕು. ಗ್ರಾಮೀಣ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಬ್ಯಾಂಕ್ 75 ಹಳ್ಳಿಗಳನ್ನು ಕೃಷಿ ಅಭಿವೃದ್ಧಿಗಾಗಿ ದತ್ತು ಸ್ವೀಕರಿಸಿದೆ. ಈ ನಿಟ್ಟಿನಲ್ಲಿ ಭೂಮಿಲಕ್ಷ್ಮಿ, ಸಾಗರಲಕ್ಷ್ಮಿ, ಗ್ರಾಮಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಪ್ರಕಾಶ್, ಕೃಷಿ ಅಭಿವೃದ್ಧಿಯ ಯೋಜನೆಗಳು ಕೃಷಿಕರನ್ನು ನೇರವಾಗಿ ತಲುಪದೇ ಇರುವುದರಿಂದಲೂ ಕೃಷಿ ಕ್ಷೇತ್ರ ಹಿಂದುಳಿದಿದೆ ಎಂದರು. ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕ ಐ.ರಮಾನಂದ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಹಿಂದೂ ವಿದ್ಯಾದಾಯಿನಿ ಸಂಘ ಉಪಾಧ್ಯಕ್ಷ ಪಿ.ರಂಜನ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಲಾಯಿತು. ವಿಐಎಆರ್ಡಿ ನಿರ್ದೇಶಕ ಸತೀಶ್ ರಾವ್ ಇಡ್ಯಾ, ಹಿರಿಯ ಪ್ರಾದೇಶಿಕ ಪ್ರಬಂಧಕ ಕೆ.ಅನಿಲ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ಹಿಂದೂ ವಿದ್ಯಾದಾಯಿನಿ ಸಂಘದ ಗಿರಿಧರ ಹತ್ವಾರ್ ಮತ್ತಿತರರಿದ್ದರು.