ದಾವಣಗೆರೆ: ಕೃಷಿ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಿಂದ ನಮ್ಮ ದೇಶದ ರೈತರು, ಕೂಲಿ ಕಾರ್ಮಿಕರ ಬದುಕು ಹಾಳಾಗಲಿದೆ.ಇದರ ವಿರುದ್ಧ ಯುವಜನರು,ರೈತರು, ಕೂಲಿ ಕಾರ್ಮಿಕರು ಧ್ವನಿ ಎತ್ತಬೇಕೆಂದು ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯಾಧ್ಯಕ್ಷ ಎನ್.ಎಲ್.ಭರತ್ರಾಜ್ ಬುಧವಾರ ಇಲ್ಲಿ ಹೇಳಿದರು.
ಡಿವೈಎಫ್ಐ ಏರ್ಪಡಿಸಿದ್ದ ತಾಲ್ಲೂಕು ಮಟ್ಟ 3ನೇ ಯುವಜನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬಂಡವಾಳ ಹೂಡಿಕೆ ಪರಿಣಾಮವಾಗಿ ವಿದೇಶಿ ಕಂಪೆನಿಗಳು ನಮ್ಮ ದೇಶದ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುತ್ತವೆ. ಇಲ್ಲಿನ ರೈತರು ಅವರೊಂದಿಗೆ ಪೈಪೋಟಿ ನಡೆಸಲು ಆಗುವುದಿಲ್ಲ ಎಂದು ಎಚ್ಚರಿಸಿದರು.
ಬಡ ರೈತರಿಗೆ ಭೂಮಿಯ ಹಕ್ಕುಪತ್ರ ನೀಡಬೇಕು. ಬರದಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು. ನೆರೆ ರಾಜ್ಯಗಳಲ್ಲಿ ಇರುವಂತೆ ಕಡಿಮೆ ದರದಲ್ಲಿ ಪಡಿತರ ಕೊಡಬೇಕು ಎಂದು ಒತ್ತಾಯಿಸಿದರು.
ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಎಚ್.ಅರುಣ್ಕುಮಾರ್ ಮಾತನಾಡಿ, ಭ್ರಷ್ಟಾಚಾರವನ್ನು ವಿರೋಧಿಸುವ ಇಚ್ಛಾಶಕ್ತಿ ರಾಜಕೀಯ ಪಕ್ಷಗಳಿಗಿಲ್ಲ. ಬದಲಾಗಿ ಅವು ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುವ ಕೆಲಸ ಮಾಡುತ್ತಿವೆ. ಲೋಕಪಾಲ ಮಸೂದೆ ಜಾರಿ ಬಗ್ಗೆಆಸಕ್ತಿಯಿಲ್ಲ ಉದ್ಯೋಗಾಧಾರಿತ ಶಿಕ್ಷಣ ನೀಡುವ ಐಟಿಐ, ಡಿಪ್ಲೊಮಾ ಕಾಲೇಜುಳಲ್ಲಿ ಉನ್ನತ ತಂತ್ರಜ್ಞಾನ ಅಳವಡಿಸಬೇಕು ಎಂದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಇ. ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ರಾಜೇಶ್ ನೇರ್ಲಿಗೆ, ಎಸ್ಎಫ್ಐ ಜಿಲ್ಲಾಧ್ಯಕ್ಷ ಮಂಜುನಾಥ ಕಲ್ಲಳ್ಳಿ ಹಾಜರಿದ್ದರು.