ಬೆಂಗಳೂರು: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಭಾನುವಾರ ಹೆಚ್ಚಿದ್ದು. ಕೃಷ್ಣಾ ನದಿ ಹರಿವಿನಲ್ಲಿ ಸುಮಾರು ಒಂದು ಮೀಟರ್ ಏರಿಕೆ ದಾಖಲಾಗಿದೆ. ಉಪ ನದಿಗಳಾದ ದೂಧಗಂಗಾ ಮತ್ತು ವೇದಗಂಗಾ ಹರಿವಿನಲ್ಲೂ ಏರಿಕೆ ಕಂಡು ಬರುತ್ತಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಮಲಿಕವಾಡ- ದತ್ತವಾಡ ಕೆಳಹಂತದ ಸೇತುವೆಯೂ ಜಲಾವೃತಗೊಂಡಿದೆ. ಇದರೊಂದಿಗೆ ಈ ತಾಲ್ಲೂಕಿನಲ್ಲಿ ಮುಳುಗಡೆಯಾಗಿರುವ ಕೆಳಮಟ್ಟದ ಸೇತುವೆಗಳ ಸಂಖ್ಯೆ 7ಕ್ಕೆ ಏರಿದೆ.
ಈ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಕಲ್ಲೋಳ- ಯಡೂರ, ಸದಲಗಾ- ಬೋರಗಾಂವ, ಕಾರದಗಾ-ಭೋಜ, ಭೋಜವಾಡಿ- ಕುನ್ನೂರ, ಸಿದ್ನಾಳ- ಅಕ್ಕೋಳ, ಜತ್ರಾಟ -ಭೀವಶಿ ಸೇತುವೆಗಳೂ ಇನ್ನೂ ಜಲಾವೃತವಾಗಿಯೇ ಇವೆ.
ನದಿಗಳ ಹರಿವಿನಲ್ಲಿ ಏರಿಕೆ ಕಂಡು ಬರುತ್ತಿರುವುದರಿಂದ ರೈತರು ನದಿ ತೀರದಲ್ಲಿರುವ ಹೊಲಗದ್ದೆಗಳಿಂದ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.
ಹೆಚ್ಚಿದ ಒಳಹರಿವು: ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ.
ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಿದೆ. ಬೆಳಗಾವಿ, ಹಾವೇರಿ, ಧಾರವಾಡ, ಉತ್ತರ ಕನ್ನಡದಲ್ಲಿ ಸಣ್ಣ ಮಳೆಯಾಗಿದೆ.
ಉ.ಕ. ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಲ್ಲಿ ಮಳೆ ಮಾಯವಾಗಿದೆ. ಅರೆಬಯಲುಸೀಮೆಯ ಹಳಿಯಾಳ, ದಾಂಡೇಲಿ, ಮುಂಡಗೋಡ ಹಾಗೂ ಮಲೆನಾಡು ಪ್ರದೇಶಗಳಾದ ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರದಲ್ಲಿಯೂ ಮಳೆ ಕ್ಷೀಣಿಸಿದೆ.
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿ್ಲýೆಗಳಲ್ಲೂ ಮಳೆ ಕಡಿಮೆಯಾಗಿದೆ.