ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೃಷ್ಣಾಗೆ ನೀರು: ಸುರಕ್ಷಿತ ಸ್ಥಳಕ್ಕೆ ತೆರಳಿ'

ಪ್ರಜಾವಾಣಿ ವಾರ್ತೆ
Last Updated 26 ಜುಲೈ 2013, 8:19 IST
ಅಕ್ಷರ ಗಾತ್ರ

ಬಾಗಲಕೋಟೆ: ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗುವ ಹುನಗುಂದ ತಾಲ್ಲೂಕಿನ 10 ಗ್ರಾಮಗಳ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಉಪವಿಭಾಗಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದರು.

ಆಲಮಟ್ಟಿ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಬಿಡುತ್ತಿರುವುದರಿಂದ ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ಜಲಾಶಯದ ಹಿನ್ನೀರಿನಿಂದ ಬಾಧಿತವಾಗುವ ಹುನಗುಂದ ತಾಲ್ಲೂಕಿನ ಹತ್ತು ಗ್ರಾಮಗಳಿಗೆ ಗುರುವಾರ ಭೇಟಿ ಗ್ರಾಮಸ್ಥರೊಂದಿಗೆ ಅವರು ಚರ್ಚಿಸಿದರು.

ಕೃಷ್ಣಾ ನದಿ ದಡದ ಕಟಗೂರು, ತುರಡಗಿ, ಕೂಡಲಸಂಗಮ ಹಾಗೂ ಮಲಪ್ರಭಾ ನದಿ ದಡದಲ್ಲಿರುವ ಬಿಸ್ನಾಳ, ಬಸನಾಳ ಕೊಪ್ಪ, ಅಡಿಹಾಳ, ಇದ್ದಲಗಿ, ಕಮದತ್ತ, ವರಗೋಡದಿನ್ನಿ, ಕೆಂಗಲ್ಲ ಗ್ರಾಮಗಳ ಜನರು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರು.

ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತವಾಗುವ ಕಟಗೂರ, ತುರಡಗಿ, ಕೂಡಲಸಂಗಮ ಗ್ರಾಮಗಳಿಗೆ ಈಗಾಗಲೇ ಲೇಔಟ್‌ಗಳನ್ನು ಗುರುತಿಸಲಾಗಿದ್ದು, ಕೆಲವರಿಗೆ ಹಕ್ಕು ಪತ್ರಗಳನ್ನು ಹಾಗೂ ಮೊದಲ ಹಂತದ ಪರಿಹಾರಧನವನ್ನು ಸಹ ವಿತರಿಸಲಾಗಿದೆ' ಎಂದರು.

ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗಿರುವ ತಾತ್ಕಾಲಿಕ ಶೆಡ್, ಗಂಜಿ ಕೇಂದ್ರ, ಅಗತ್ಯ ಬೋಟ್ ವ್ಯವಸ್ಥೆಯನ್ನು ಅವರು ಪರಿಶೀಲಿಸಿದರು.
`ಕಟಗೂರ ಲೇಔಟ್‌ನಲ್ಲಿ ಕೆಬಿಜೆಎನ್‌ಎಲ್‌ನ ಪುನರ್ವಸತಿ ಅಧಿಕಾರಿಗಳು ನೀರಿನ ವ್ಯವಸ್ಥೆ ಕಲ್ಪಿಸಿದರೆ ತಾವು ತಮ್ಮ ಸ್ಥಳಗಳಿಗೆ ತೆರಳುವುದಾಗಿ' ಗ್ರಾಮಸ್ಥರು ತಿಳಿಸಿದರು.

ಬಸನಾಳಕೊಪ್ಪದ ಬಹುತೇಕ ಎಲ್ಲ ಕುಟುಂಬಗಳು ತಾತ್ಕಾಲಿಕ ಶೆಡ್‌ಗಳಲ್ಲಿ ನೆಲೆಸಿದ್ದಾರೆ. ಶಿರೂರ ಕುಟುಂಬದ ಮೂರು ಮನೆತನಗಳು ಹಳೆಯ ಮನೆಗಳಲ್ಲಿದ್ದು ಮೂನ್ಸೂಚನೆ ಎಚ್ಚರಿಕೆ ಗಮನಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.

ಕೂಡಲಸಂಗಮದ ಬಹುತೇಕ ಎಲ್ಲ ಕುಟುಂಬಗಳಿಗೆ ಮೊದಲ ಹಂತದ ಪರಿಹಾರ ಧನ ನೀಡಲಾಗಿದ್ದು,  ಕೆಲವು ಕುಟುಂಬಗಳು ಮಾತ್ರ ಕಜಗಲ್ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿವೆ.

ಹುನಗುಂದ ತಹಶೀಲ್ದಾರ್ ಪಂಪನಗೌಡ ಮೇಲ್ಸೀಮೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ತೋಟದ, ಶಿಶು ಅಭಿವೃದ್ಧಿ ಅಧಿಕಾರಿ ಪಿ.ವೈ. ಗಾಜಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕುಸುಮ ಮಾಗಿ  ಉಪಸ್ಥಿತರಿದ್ದರು.

ಡಿ.ಸಿ. ಸೂಚನೆ: ನಾರಾಯಣ ಜಲಾಶಯ ಹಿನ್ನೀರಿನಿಂದ ಬಾಧೆಗೊಳಗಾಗಿರುವ ಹತ್ತು ಗ್ರಾಮಗಳ ಕಟ್ಟಡಗಳ ಮೌಲ್ಯಮಾಪನ ಕಾರ್ಯ ಈವರೆಗೂ ಪೂರ್ಣಗೊಳಿಸದೆ ಇರುವುದಕ್ಕೆ ಜಿಲ್ಲಾಧಿಕಾರಿ ಮನೋಜ್ ಜೈನ್ ಅತೃಪ್ತಿ ವ್ಯಕ್ತಪಡಿಸಿದರು.

ಈ ಕಾರ್ಯವನ್ನು ಶೀಘ್ರವೇ ಕೈಗೊಂಡು ಇನ್ನೆರಡು ವಾರಗಳಲ್ಲಿ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ವಿಭಾಗದ ಮುಖ್ಯ ಎಂಜಿನಿಯರ್ ರವೀಂದ್ರ ಕಲ್ಯಾಣ ಅವರಿಗೆ ಸೂಚಿಸಿದರು.

`10 ಗ್ರಾಮಗಳ 2874 ಕಟ್ಟಡಗಳ ಮೌಲ್ಯಮಾಪನ ಕಾರ್ಯವನ್ನು ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಚ್. ಕೋಲಕರ ಅವರು ನಿರ್ಲಕ್ಷಿಸಿದ್ದಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT