ಸಂಡೂರು ತಾಲ್ಲೂಕಿನ ಕೃಷ್ಣಾನಗರ ಐತಿಹಾಸಿಕ ಸ್ಮಾರಕ ಹಾಗೂ ಕೋಟೆ ಕೊತ್ತಲಗಳಿಂದಾಗಿಯೇ ಪ್ರಸಿದ್ಧಿ ಪಡೆದ ಊರು. ಇಲ್ಲಿಯ ಕೋಟೆ ಹಾಗೂ ಕೋಟೆಯಲ್ಲಿನ ಅವಶೇಷಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿವೆ.
ಕೃಷ್ಣಾನಗರ ಕೋಟೆಯ ನಿರ್ಮಾಣ ಕಾರ್ಯವನ್ನು ಹೈದರಾಲಿ ಪ್ರಾರಂಭಿಸಿದ್ದ. ಅವನ ಮಗ ಟಿಪ್ಪು ಸುಲ್ತಾನ್ ಈ ಕೋಟೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಕೋಟೆಯು ಮೂರು ಸುತ್ತುಗಳನ್ನು ಒಳಗೊಂಡಿದ್ದು, ಕೋಟೆಯನ್ನು ದೊಡ್ಡಗಾತ್ರದ ಕಾಡುಗಲ್ಲುಗಳಿಂದ ಕಟ್ಟಲಾಗಿದೆ. ಪ್ರವೇಶ ದ್ವಾರಗಳ ಮೇಲೆ ಸುಂದರ ಕೆತ್ತನೆ ಇದೆ.
ಕೋಟೆಯ ನಾಲ್ಕು ಮೂಲೆಯಲ್ಲಿ ಮದ್ದುಗುಂಡು ಸಂಗ್ರಹಿಸುವ ಕೋಣೆಗಳಿದ್ದು, ಅವುಗಳನ್ನು ಇಟ್ಟಿಗೆ ಗಳಿಂದ ನಿರ್ಮಿಸಲಾಗಿದೆ. ಇಂದು ಅವು ಶಿಥಿಲಗೊಂಡಿವೆ. ಕೋಟೆ ಸಹ ಹಲವು ಕಡೆ ಶಿಥಿಲಗೊಂಡಿದೆ. ಕೋಟೆಯ ಮೇಲೆ ಆಲ್ಲಲ್ಲಿ ಗಿಡಮರಗಳು ಬೆಳೆದು ಕೊಂಡು ಬೇರು ಬಿಟ್ಟಿರುವುದರಿಂದ, ಕೋಟೆಮತ್ತಷ್ಟು ಶಿಥಿಲಗೊಂಡಿದೆ.
ಟಿಪ್ಪುವಿನ ಆಡಳಿತದ ಕಾಲದಲ್ಲಿ ಈ ಕೋಟೆಯಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಸೈನಿಕರಿಗೆ ತರಬೇತಿಯನ್ನೂ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
ವೈರಿಗಳು ಕೋಟೆಯೊಳಗೆ ಸುಲಭವಾಗಿ ಪ್ರವೇಶಿಸಲು ಸಾಧ್ಯ ವಾಗ ದಂತೆ ಕೋಟೆಯ ಸುತ್ತಲೂ ಕಂದಕ ನಿರ್ಮಾಣ ಮಾಡ ಲಾಗಿದೆ. ಕಂದಕದಲ್ಲಿ ಅಲ್ಲಲ್ಲಿ ನೀರು ನಿಂತಿದೆ. ಕೋಟೆಯ ಒಂದು ಭಾಗದ ಮಧ್ಯದಲ್ಲಿ ಬಂಡೆಯ ಮೇಲೆ ಆಂಜಿನೇಯನ ಮೂರ್ತಿ ಇದೆ. ಇದು ಟಿಪ್ಪುವಿನ ಧರ್ಮಸಹಿಷ್ಣುತಾ ಭಾವನೆಯ ಮೇಲೆ ಬೆಳಕು ಚೆಲ್ಲುತ್ತದೆ. ಇದಕ್ಕೆ ಸ್ಥಳೀಯರು ಪೂಜೆ ಮಾಡು ತ್ತಾರೆ.
ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು, ಪುರಾತತ್ವ ನಿವೇಶನಗಳು, ಅವಶೇಷಗಳ ಅಧಿನಿಯಮ 1961ರ ಕಲಂ 3ರ ಅಡಿಯಲ್ಲಿ ಇದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. ಇಲ್ಲಿ ಮಳೆ ಬಂತು ಮಳೆ ಹಾಗೂ ಹುಲಿ ಹೆಜ್ಜೆ ಎಂಬ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ.
ಕೃಷ್ಣಾನಗರ ಕೋಟೆಯ ದುರಸ್ತಿಗೆ ಪುರಾತತ್ವ ಇಲಾಖೆ ಮುಂದಾಗಿದೆ. ಕೋಟೆಯ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮುಂದಿನ ತಲೆಮಾರುಗಳಿಗೆ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿ ಕೊಳ್ಳುವ ದಿಸೆಯಲ್ಲಿ ಸಂರಕ್ಷಣೆಯ ಕಾರ್ಯ ಆರಂಭವಾಗಿದೆ.
ಕೋಟೆಯ ಗೋಡೆ ಬಿದ್ದಿರುವ ಸ್ಥಳದಲ್ಲಿ ಗೋಡೆ ಕಟ್ಟಲಾಗಿದೆ. ಕೋಟೆಯ ಮೇಲೆ ಬೆಳೆದಿದ್ದ ಗಿಡ ಮರಗಳನ್ನು ಕಡಿದು ಸ್ವಚ್ಛಗೊಳಿಸಲಾಗಿದೆ. 13ನೇ ಹಣಕಾಸು ಯೋಜನೆಯಡಿಯಲ್ಲಿ ಕೋಟಿ ಅಭಿವೃದ್ಧಿಗೆ ರೂ.65 ಮಂಜೂರಾಗಿದೆ.
ಕೋಟೆ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದ ಸಂದರ್ಭದಲ್ಲಿ ಆಗಿನ ಕಾಲದ ಕಬ್ಬಿಣದ ಗುಂಡೊಂದು ದೊರೆತಿದ್ದು, ಇದನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಗುತ್ತಿಗೆದಾರರಾದ ಆರ್. ನಾಗರಾಜ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.