ನೆಲ-ಜಲ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿರುವವರಿಗೆ ಬೀದಿಬೀದಿಗಳಲ್ಲಿ ಆ ವಿಷಯವನ್ನು ಸುಖಾಸುಮ್ಮನೆ ಎತ್ತಿ ಕಟ್ಟಿ, ಎದೆ ಬಡಿದುಕೊಂಡು ಓಡಾಡಿದಷ್ಟೂ ಹೆಚ್ಚು ಲಾಭ.
ಆದರೆ ಕೆಲವು ದಿನಗಳ ಹಿಂದೆ ಹೊರಬಿದ್ದ ಕೃಷ್ಣಾ ನದಿಯ ನೀರು ಹಂಚಿಕೆಯ ತೀರ್ಪಿನ ವಿಷಯದಲ್ಲಿ ಎದೆ ಬಡಿದುಕೊಳ್ಳುವವರು ಅಷ್ಟಾಗಿ ಹೆಚ್ಚಿನ ಸಂಖೆಯಲ್ಲಿ ಕಂಡುಬರಲಿಲ್ಲ. ಅದಕ್ಕೆ ಕಾರಣ ನ್ಯಾಯಮಂಡಳಿಯ ತೀರ್ಪು ಏಕಪಕ್ಷಿಯವಾಗಿರಲಿಲ್ಲ.
ಇದೇನೇ ಇದ್ದರೂ, ಕೃಷ್ಣಾ ನದಿ ತೀರ್ಪು ಬಂದ ಮೇಲೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎನ್ನುವುದೇ ತಿಳಿಯದಾಗಿದೆ. ತೀರ್ಪಿನ ಪ್ರಕಾರ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ನೀರು ದೊರೆತಿದ್ದರೂ, ನಮಗೆ ಅನ್ಯಾಯವಾಗಿದೆ ಎಂದು ಆಂಧ್ರ ಮುಖ್ಯಮಂತ್ರಿ ಕಿರಣ್ ರೆಡ್ಡಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರೆ.
ಆದರೆ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ದೊರೆಯಬೇಕಾದ ಪಾಲು ಸಿಗದಿದ್ದರೂ, ರಾಜ್ಯ ಸರ್ಕಾರ ಮಾತ್ರ ಸಂತೃಪ್ತಿಯಿಂದ ಬೀಗುತ್ತಿರುವುದು ಅಚ್ಚರಿ ಹುಟ್ಟಿಸುತ್ತದೆ! ಈ ಸರ್ಕಾರಕ್ಕೆ ನೀರಾವರಿ ವಿಷಯದಲ್ಲಿ ಸರಿಯಾದ ತಿಳುವಳಿಕೆ ಇರುವುದೇ ಎನ್ನುವ ಬಗ್ಗೆ ಈಗ ಅನುಮಾನಕ್ಕೆ ಎಡೆಕೊಟ್ಟಂತಾಗಿದೆ.