ಚಿಕ್ಕೋಡಿ: ಕಳೆದ ಹತ್ತಾರು ದಿನಗಳಿಂದ `ಮಹಾ' ಮಳೆಯಿಂದಾಗಿ ತಾಲ್ಲೂಕಿನ ನದಿದಡದ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಬುಧವಾರ ಸರಿಸುಮಾರು 3 ಅಡಿಯಷ್ಟು ಇಳಿಕೆ ದಾಖಲಾಗಿದ್ದು, ನದಿತೀರದ ನಿವಾಸಿಗಳು ಪ್ರವಾಹ ಭೀತಿಯಿಂದ ಹೊರಬಂದಿದ್ದಾರೆ.
ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಎಡೆಬಿಡದೇ ಸುರಿಯುತ್ತಿದ್ದ ಮಳೆಯ ಪ್ರಮಾಣ ತೀವ್ರವಾಗಿ ಕ್ಷೀಣಿ ಸಿದೆ. ತಾಲ್ಲೂಕಿನಲ್ಲಿ ಕೃಷ್ಣಾ ನದಿ ಹರಿವಿ ನಲ್ಲಿ ಒಂದೂವರೆ ಅಡಿಯಷ್ಟು ಇಳಿಕೆ ದಾಖಲಾದರೆ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಹರಿವಿನಲ್ಲಿ ಸುಮಾರು 3 ಅಡಿಯಷ್ಟು ಇಳಿಮುಖ ಕಂಡುಬಂದಿದೆ.
ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜ್ಯಕ್ಕೆ ಹರಿದು ಮಂಗಳವಾರ ಹರಿದು ಬರುತ್ತಿದ್ದ ಒಟ್ಟು 2.01 ಲಕ್ಷ ಕ್ಯೂಸೆಕ್ ನೀರಿನ ಪ್ರಮಾಣ ಬುಧವಾರ 1.78 ಲಕ್ಷ ಕ್ಯೂಸೆಕ್ಗೆ ತಗ್ಗಿದೆ. ಹಿಪ್ಪರಗಿ ಜಲಾಶಯದಿಂದ ಬುಧವಾರ 22 ಕ್ರಸ್ಟ್ಗೇಟ್ಗಳ ಮೂಲಕ 2,29,100 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ತಾಲ್ಲೂಕಿನಲ್ಲಿ ವೇದಗಂಗಾ ನದಿಯ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ, ದೂಧಗಂಗಾ ನದಿಯ ಸದಲಗಾ-ಬೋರಗಾಂವ, ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಯಕ್ಸಂಬಾ-ದಾನವಾಡ ಹಾಗೂ ಕೃಷ್ಣಾ ನದಿಯ ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಇನ್ನೂ ಜಲಾವೃತವಾಗಿಯೇ ಇವೆ.
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣದಲ್ಲಿ ಕೊಂಚ ಏರಿಕೆ ದಾಖಲಾಗಿದೆ. ಕೊಯ್ನಾದಲ್ಲಿ 75 ಮಿ.ಮೀ, ನವಜಾ: 65 ಮಿ.ಮೀ, ಮಹಾಬಳೇಶ್ವರ: 130 ಮಿ.ಮೀ, ವಾರಣಾ: 106ಮಿ.ಮೀ, ಮತ್ತು ಕೊಲ್ಹಾಪುರ: 20ಮಿ.ಮೀ. ತಾಲ್ಲೂಕಿನಲ್ಲಿ ಮಳೆ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ.
ಸೇತುವೆಗಳ ಮಂಗಳವಾರದ ನೀರಿನ ಮಟ್ಟ: ಕಲ್ಲೋಳ: 533.80ಮೀ (ಅಪಾಯದ ಮಟ್ಟ: 538.00), ಅಂಕಲಿ: 533.10(ಅಪಾಯದ ಮಟ್ಟ: 537.00ಮಿ), ಸದಲಗಾ: 535.77 (ಅಪಾಯದ ಮಟ್ಟ: 538.00) ಕುಡಚಿ: 530.71 (ಅಪಾಯದ ಮಟ್ಟ529.00).
ರಾಯಬಾಗ ವರದಿ
ರಾಯಬಾಗ: ಮಹಾರಾಷ್ಟ್ರದಲ್ಲಿ ಮಳೆ ಬಿಡುವು ಕೊಟ್ಟರೂ ವಿವಿಧ ಜಲಾಶಯಗಳ ನೀರಿನ ಹರಿವು ಹೆಚ್ಚಾಗಿದ್ದರೂ ಪ್ರವಾಹ ಶಾಂತವಾಗಿದೆ. ಬುಧವಾರ ಕೃಷ್ಣಾನದಿಯ ಪ್ರವಾಹದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಂಗಳವಾರ ಮಧ್ಯಾಹ್ನ ನದಿಯ ಪ್ರವಾಹದ ಏರಿಕೆ 15.77 ಮೀಟರ್ನಷ್ಟು ಇದ್ದುದು ಬುಧವಾರ ಪ್ರವಾಹದ ಇಳಿಕೆ 15.45 ಮೀಟರ್ನಷ್ಟು ಇದೆ. 14.00 ಮೀಟರ್ನಷ್ಟು ಪ್ರವಾಹದಲ್ಲಿ ಇಳಿಕೆಯಾದಾಗ ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತದೆ. ಗಂಟೆಗೆ ಎರಡು ಸೆಂಟಿಮೀಟರ್ನಷ್ಟು ಇಳಿಕೆ ಪ್ರಮಾಣ ಇದೆ. ಗುರುವಾರ ಬೆಳಗಿನ ಹೊತ್ತಿಗೆ ಇಳಿಕೆ ಪ್ರಮಾಣ ಹೆಚ್ಚಗಬಹು ದಾಗಿದೆ. ಒಳಹರಿವು 2.26 ಲಕ್ಷ ಕ್ಯೂಸೆಕ್ ಇದೆ ಎಂದು ಜಲಮಾಪನ ಅಧಿಕಾರಿ ಎ.ಎಸ್.ಹಿರೇಕೋಡಿ ತಿಳಿ ಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.