ನವದೆಹಲಿ (ಪಿಟಿಐ): ಆಂಧ್ರ ಪ್ರದೇಶ ಕೇಡರ್ನ ಐಪಿಎಸ್ ಅಧಿಕಾರಿ ಕೆ.ದುರ್ಗಾ ಪ್ರಸಾದ್ ಅವರು ಗಣ್ಯರ ವಿಶೇಷ ರಕ್ಷಣಾ ತಂಡದ (ಎಸ್ಪಿಜಿ) ನೂತನ ಮುಖ್ಯಸ್ಥರಾಗುವ ಸಾಧ್ಯತೆ ಇದೆ.
7 ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ಸೋಮವಾರ ನಿವೃತ್ತಿ ಹೊಂದಲಿರುವ ಬಿ.ವಿ.ವಾಂಚೂ ಅವರ ಸ್ಥಾನವನ್ನು ಪ್ರಸಾದ್ ವಹಿಸಿಕೊಳ್ಳಲಿದ್ದಾರೆ. ಪ್ರಧಾನಿ ಮತ್ತು ಅವರ ಕುಟುಂಬ ಸದಸ್ಯರ ರಕ್ಷಣೆಯ ಹೊಣೆಯನ್ನು ಎಸ್ಪಿಜಿ ವಹಿಸಿಕೊಂಡಿದೆ. ಜತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕ ಅವರ ರಕ್ಷಣೆಯ ಹೊಣೆಯೂ ಎಸ್ಪಿಜಿಗಿದೆ. ವಾಂಚೂ, ಸೋನಿಯಾ ಅವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದರು.
1981ನೇ ತಂಡದ ಐಪಿಎಸ್ ಅಧಿಕಾರಿಯಾಗಿರುವ ಪ್ರಸಾದ್, ಪ್ರಸ್ತುತ ಆಂಧ್ರ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿ (ಕ್ರೀಡೆ) ಕಾರ್ಯ ನಿರ್ವಹಿಸುತ್ತಿದ್ದಾರೆ. ಎಸ್ಪಿಜಿಯಲ್ಲಿ ಸೇವೆ ಸಲ್ಲಿಸಿದ ಯಾವ ಅನುಭವವೂ ಪ್ರಸಾದ್ ಅವರಿಗಿಲ್ಲ. 23 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಎಸ್ಪಿಜಿ ಮುಖ್ಯಸ್ಥ ಹುದ್ದೆಗೆ ಇಬ್ಬರನ್ನು ಸಂದರ್ಶಿಸಲಾಗಿತ್ತು. ಅವರಲ್ಲಿ ಪ್ರಸಾದ್ ಆಯ್ಕೆ ಖಚಿತ ಎನ್ನಲಾಗಿದೆ.