ಮಹಾಲಿಂಗಪುರ: ನಗರದಲ್ಲಿಯೇ ವಿಶಾಲವಾದ ಬಡಾವಣೆಯಾದ ಕೆಂಗೇರಿ ಮಡ್ಡಿಯಲ್ಲಿ ಈಗ ಪುರಸಭೆಯ ಗುತ್ತಿಗೆದಾರರಿಂದ ಅಕ್ರಮ ಗರಸು ಸಾಗಾಣಿಕೆ ನಡೆಯುತ್ತಿದ್ದು ಕೂಡಲೇ ಈ ದಂದೆಯನ್ನು ತಡೆಯಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಹನುಮಂತರಾವ್ ಜಮಾದಾರ ಆಗ್ರಹಿಸಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ಬಡಾವಣೆ ನೀರು ನಿಲ್ಲುವ ಕೆರೆಯಾಗುವ ಆತಂಕವಿದೆ. ಈಗಾಗಲೇ ಸುಮಾರು 10 ಅಡಿಯಷ್ಟು ಅಗೆತ ಮಾಡಿ ಇಲ್ಲಿಯ ಅಮೂಲ್ಯ ಗರಸನ್ನು ಕೊಳ್ಳೆ ಹೊಡೆದಿರುವ ಗುತ್ತಿಗೆದಾರರ ವ್ಯವಹಾರವನ್ನು ಕೂಡಲೇ ನಿಲ್ಲಿಸಬೇಕು ಎಂದು ಜಿಲ್ಲಾ ಎಸ್ಸಿ ಮೋರ್ಚಾ ಬಿಜೆಪಿ ಉಪಾಧ್ಯಕ್ಷ ಹನಮಂತರಾವ್ ಜಮಾದಾರ ಆಗ್ರಹಿಸಿದ್ದಾರೆ.
ಈಗಾಗಲೇ ಹಲವು ಬಾರಿ ಆಕ್ರಮ ದಂದೆ ನಿಲ್ಲಿಸುವಂತೆ ಕೋರಿ ಪುರಸಭೆಗೆ ಮನವಿ ಸಲ್ಲಿಸಲಾಗಿತ್ತು. ಆದರೂ ನಿರಾತಂಕವಾಗಿ ನಡೆಯುತ್ತಿರುವ ಗರಸು ಸಾಗಾಣಿಕೆ ಅಕ್ರಮದಲ್ಲಿ ಸಂಬಂಧಿಸಿದ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಸರಕಾರ ನಿವೇಶನಗಳಿಗಾಗಿ ಜಾಗೆಯನ್ನು ಮಂಜೂರು ಮಾಡಿದೆ.
ಗರಸು ಸಾಗಾಣಿಕೆಯಿಂದಾಗಿ ಬಡವರಿಗೆ ನೀಡುವ ನಿವೇಶನಗಳಿಗೆ ಜಾಗೆಯ ಕೊರತೆಯಾಗಿದೆ ಎಂದು ದೂರಿದರು.ಈಗಾಗಲೇ ನಿರ್ಮಾಣಗೊಂಡ ಅಶ್ರಯ ಮನೆಗಳ ಸಮೀಪದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಮನೆಗಳಿಗೂ ತೊಂದರೆ ಹಾನಿಯಾಗಲಿದೆ ಎಂದು ಜಮಾದಾರ ಆರೋಪಿಸಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.